ಮಂಗಳೂರು: ಬಿಗ್ ಬಾಸ್ ಸೀಸನ್ 9 ವಿನ್ನರ್ ರೂಪೇಶ್ ಶೆಟ್ಟಿ ನಿನ್ನೆ ಮಂಗಳೂರಿಗೆ ಆಗಮಿಸಿದ್ದು ಅವರಿಗೆ ಭರ್ಜರಿ ಸ್ವಾಗತ ಸಿಕ್ಕಿದೆ.ಇನ್ನು ಈ ವೇಳೆ ಮಾತನಾಡಿದ ರೂಪೇಶ್ ಶೆಟ್ಟಿ “ನಾನು ಕೊರಗಜ್ಜನ ಭಕ್ತ. ಬಿಗ್ಬಾಸ್ ಮನೆಯಲ್ಲಿ ಟಾಸ್ಕ್ಗಳು ಸೇರಿದಂತೆ ಇಡೀ ಸೀಸನ್ ಗೆಲ್ಲಲು ಕೊರಗಜ್ಜನ ಆಶೀರ್ವಾದವೇ ಕಾರಣ. ಮಂಗಳೂರಿಗೆ ಆಗಮಿಸಿದಾಗ ಮೊದಲು ಕೊರಗಜ್ಜನ ಸನ್ನಿಧಿಗೆ ಹೋಗಬೇಕು ಅಂದುಕೊಂಡಿದ್ದೆ. ಅದರಂತೆ ತೆರಳುತ್ತೇನೆ’ ಎಂದು ಬಿಗ್ಬಾಸ್ ಕನ್ನಡ 9ನೇ ಆವೃತ್ತಿ ಮತ್ತು ಒಟಿಟಿ ಬಿಗ್ಬಾಸ್ ವಿಜೇತ ರೂಪೇಶ್ ಶೆಟ್ಟಿ ಹೇಳಿದ್ದಾರೆ.
ರೂಪೇಶ್ ಗೆಲುವಿನ ಬಳಿಕ ಮೊದಲ ಬಾರಿ ನಿನ್ನೆ ಮಂಗಳೂರಿಗೆ ಆಗಮಿಸಿದ್ದು, ನೆಹರೂ ಮೈದಾನದಿಂದ ಕುತ್ತಾರಿನ ಕೊರಗಜ್ಜನ ಕ್ಷೇತ್ರದವರೆಗೆ ವಿಜಯ ಯಾತ್ರೆ ನಡೆಯಿತು. ಮಾಧ್ಯಮದವರ ಜತೆ ಮಾತನಾಡಿದ ಅವರು, ನಾನೊಬ್ಬ ತುಳುವ. ನನ್ನ ಬಿಗ್ಬಾಸ್ ಯಾನಕ್ಕೆ ತುಳುನಾಡಿಗರು ಸೇರಿದಂತೆ ರಾಜ್ಯದ ಜನತೆ ಪ್ರೀತಿ ತೋರಿಸಿದ್ದಾರೆ ಎಂದರು. ಬಿಗ್ಬಾಸ್ ಮನೆಯಲ್ಲಿ ತುಳುನಾಡಿನ ಸಂಸ್ಕೃತಿ ಹುಲಿವೇಷವನ್ನು ಪ್ರದರ್ಶಿಸಲು ಅವಕಾಶ ನೀಡಿದ್ದು ತುಂಬಾ ಖುಷಿ ಯಾಯಿತು. ಬಿಗ್ಬಾಸ್ ಮತ್ತು ಒಟಿಟಿ ಸೀಸನ್ ಇತಿಹಾಸದಲ್ಲಿ ಅತ್ಯಂತ ಹೆಚ್ಚಿನ ಮತ ಪಡೆದವ ನಾನು ಎಂದು ತಿಳಿದು ಖುಷಿಯಾಗಿದೆ. ಇದು ಪ್ರತಿ ಅಭಿಮಾನಿಯ ಗೆಲುವು ಎಂದರು.