ಸಾಗರ: ಬಾಣಂತಿಯೊಬ್ಬರು ಶಸ್ತ್ರ ಚಿಕಿತ್ಸೆಗೆ ದಾಖಲಾಗಿದ್ದ ಸಂದರ್ಭದಲ್ಲಿ ತಾಯಿ-ಮಗು ಆಸ್ಪತ್ರೆಯ ಪ್ರಸೂತಿ ವೈದ್ಯ ಡಾ. ನಾಗೇಂದ್ರಪ್ಪ ಅವರು ಬಾಣಂತಿಗೆ ಕಪಾಳಮೋಕ್ಷ ಮಾಡಿದ್ದು, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ವೈದ್ಯರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಯಿ-ಮಗು ಆಸ್ಪತ್ರೆಗೆ ಅ. 1 ರಂದು ಲೋಕೇಶ್ ಎಂಬವರ ಪತ್ನಿಯನ್ನು ಸಂತಾನಹರಣ ಚಿಕಿತ್ಸೆಗೆ ದಾಖಲು ಮಾಡಲಾಗಿತ್ತು. ಬೆಳಿಗ್ಗೆ 9.45 ಕ್ಕೆ ಡಾ. ನಾಗೇಂದ್ರಪ್ಪ ಶಸ್ತ್ರಚಿಕಿತ್ಸೆ ಮಾಡಿದ್ದರು. ಶಸ್ತ್ರ ಚಿಕಿತ್ಸೆಯ ಬಳಿಕ ಡಾ. ನಾಗೇಂದ್ರಪ್ಪ ವಿನಾ ಕಾರಣ ಲೋಕೇಶ್ ಅವರ ಪತ್ನಿಯ ಕೆನ್ನೆಗೆ ರಭಸವಾಗಿ ಹೊಡೆದಿದ್ದಾರೆ. ಇದರಿಂದ ಮಹಿಳೆಗೆ ಕಿವಿ ನೋವಾಗಿದ್ದು ಮಾನಸಿಕವಾಗಿ ಹೆದರಿದ್ದಾರೆ. ಇನ್ನು ಈ ಘಟನೆಯ ಬಳಿಕ ಬಾಣಂತಿಗೆ ಹೊಡೆದಿರುವ ಕಾರಣ ತಿಳಿಯಲು ಲೋಕೇಶ್, ಡಾ. ನಾಗೇಂದ್ರಪ್ಪ ಅವರನ್ನು ಭೇಟಿಯಾಗಲು ಆಸ್ಪತ್ರೆಯಲ್ಲಿ ಹುಡುಕಿದಾಗ ಅವರು ನಾಪತ್ತೆಯಾಗಿದ್ದರು ಎನ್ನಲಾಗಿದೆ. ಈ ಬಗ್ಗೆ ಫೋನ್ ಕರೆ ಮಾಡಿ ವಿಚಾರಿಸಿದಾಗ ನೀವು ಏನು ಬೇಕಾದರೂ ಮಾಡಿಕೊಳ್ಳಿ. ನನಗೂ ಕಾನೂನು ಗೊತ್ತಿದೆ ಎಂದು ಉಡಾಫೆಯ ಉತ್ತರ ನೀಡಿದ್ದಾರೆ ಎನ್ನಲಾಗಿದೆ.
ಡಾ. ನಾಗೇಂದ್ರಪ್ಪ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸುವಂತೆ ಲೋಕೇಶ್ ನೀಡಿದ ದೂರಿನ ಹಿನ್ನೆಲೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.