ಬಂಟ್ವಾಳ: ಮಗನ ಅಂಗಡಿ ಹೊರಗೆ ಕುಳಿತುಕೊಂಡಿದ್ದ ವೃದ್ಧೆಗೆ ಕಾರು ಡಿಕ್ಕಿಯಾದ ಪರಿಣಾಮ ವೃದ್ಧೆ ಸಾವನ್ನಪ್ಪಿರುವ ಘಟನೆ ಪಾಲೆದಮರ ಎಂಬಲ್ಲಿ ಫೆ.23 ರಂದು ನಡೆದಿದೆ. ವಾಮದಪದವು ನಿವಾಸಿ ಸುಮತಿ (91) ಮೃತ ವೃದ್ಧೆ.
ಸುಮತಿ ಅವರು ಇವರ ಮಗ ಮಂಜುನಾಥ್ ಅವರ ದಿನಸಿ ಅಂಗಡಿಯ ಹೊರಗಡೆ ಕುರ್ಚಿಯಲ್ಲಿ ಕುಳಿತುಕೊಂಡಿದ್ದರು. ಫೆ. 23 ರ ಸುಮಾರು 6.45 ರ ಸಮಯದಲ್ಲಿ ಬಂಟ್ವಾಳ ಮಣಿಹಳ್ಳ ಕಡೆಯಿಂದ ವಾಮದಪದವು ಕಡೆಗೆ ಕಾರು ಚಲಾಯಿಸಿಕೊಂಡು ಬಂದ ಶೋಭಾ ಅವರು ನಿಯಂತ್ರಣ ಸಾಧಿಸಲು ಸಾಧಿಸಲು ಸಾಧ್ಯವಾಗದೆ ಅಂಗಡಿಯೊಳಗೆ ನುಗ್ಗಿದೆ.
ತೀವ್ರವಾಗಿ ಗಾಯಗೊಂಡಿದ್ದ ವೃದ್ದೆಯನ್ನು ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸುಮಾರು 11.45 ರ ವೇಳೆ ಚಿಕಿತ್ಸೆಗೆ ಸ್ಪಂದಿಸದೆ ಇವರು ಮೃತಪಟ್ಟ ಬಗ್ಗೆ ವೈದ್ಯರು ತಿಳಿಸಿದ್ದಾರೆ.ಅಪಘಾತ ನಡೆಯುವ ದೃಶ್ಯ ಸಿ.ಸಿ.ಟಿ.ವಿ ಯಲ್ಲಿ ಸೆರೆಯಾಗಿದ್ದು,ಇದೀಗ ಪುಲ್ ವೈರಲ್ ಆಗಿದೆ . ಕಾರು ವೇಗವಾಗಿ ಬಂದು ಅಂಗಡಿಯೊಳಗೆ ನುಗ್ಗಿದ ದೃಶ್ಯ ಹಾಗೂ ಅಂಗಡಿಯ ಹೊರಗಡೆ ಕುಳಿತುಕೊಂಡಿದ್ದ ಅಜ್ಜಿಗೆ ಡಿಕ್ಕಿ ಹೊಡೆಯುವ ದೃಶ್ಯ ಕೂಡ ಇದರಲ್ಲಿ ಸೆರೆಯಾಗಿದೆ. ಪುಂಜಾಲಕಟ್ಟೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


