
ಬಂಟ್ವಾಳ ; ವಿದ್ಯುತ್ ಯಂತ್ರದಲ್ಲಿ ಸಿಲುಕಿ ನೋವಿನಿಂದ ಕಿರುಚುತ್ತಿದ್ದ ಬಿಸಿಯೂಟ ಸಿಬ್ಬಂದಿಯನ್ನು 5ನೇ ತರಗತಿಯ ಬಾಲಕನೊಬ್ಬ ತನ್ನ ಸಮಯಪ್ರಜ್ಞೆಯಿಂದ ಕಾಪಾಡಿದ ಘಟನೆ ನರಿಕೊಂಬು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ಬಾಲಕ ಮನ್ವಿತ್ನ ಈ ಸಾಹಸಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶಾಲೆಯ ಅಡುಗೆ ಮನೆಯಲ್ಲಿ ಸಿಬ್ಬಂದಿ ಕೆಲಸ ಮಾಡುತ್ತಿದ್ದಾಗ, ವಿದ್ಯುಚ್ಚಾಲಿತ ಕಾಯಿ ತುರಿಯುವ ಯಂತ್ರದಲ್ಲಿ ಅವರ ಕೈಬೆರಳುಗಳು ಆಕಸ್ಮಿಕವಾಗಿ ಸಿಲುಕಿಕೊಂಡವು. ಸಿಬ್ಬಂದಿಯ ಕಿರುಚಾಟ ಕೇಳಿದ ಮನ್ವಿತ್, ತಡಮಾಡದೆ ಧಾವಿಸಿ ಬಂದು ತಕ್ಷಣವೇ ವಿದ್ಯುತ್ ಸ್ವಿಚ್ ಆಫ್ (ಪ್ಲಗ್ ತೆರವು) ಮಾಡಿ ದೊಡ್ಡ ಅವಘಡವನ್ನು ತಪ್ಪಿಸಿದ್ದಾನೆ.
ಬಾಲಕನ ಧೈರ್ಯ ಮತ್ತು ಜಾಗರೂಕತೆಯನ್ನು ಶ್ಲಾಘಿಸಿ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿಗಳು, ಬಾಲಕನ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.
ಇದೇ ವೇಳೆ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ನೋಣಯ್ಯ ನಾಯ್ಕ್, ಸಿಆರ್ಪಿ ಜ್ಯೋತಿ, ಶಾಲಾಭಿವೃದ್ಧಿ ಸಮಿತಿ (SDMC) ಅಧ್ಯಕ್ಷ ರವಿ ಅಂಚನ್, ಸದಸ್ಯರು ಹಾಗೂ ಶಿಕ್ಷಕ ವೃಂದದವರು ಶಾಲೆಗೆ ಭೇಟಿ ನೀಡಿ ಬಾಲಕ ಮನ್ವಿತ್ನ ಸಮಯಪ್ರಜ್ಞೆಯನ್ನು ಕೊಂಡಾಡಿ ಅಭಿನಂದಿಸಿದ್ದಾರೆ.


