ಬೆಳ್ತಂಗಡಿ: ಇಪ್ಪತ್ತು ದಿನಗಳ ಹಿಂದೆ ತಾಲೂಕಿನ ಮಲವಂತಿಗೆ ಗ್ರಾಮದ ಬಂಗಾರಪಲ್ಕೆ ಜಲಪಾತದ ಸಮೀಪ ಗುಡ್ಡ ಕುಸಿದು ಸಂಭವಿಸಿದ ದುರಂತದ ಸಂದರ್ಭದಲ್ಲಿ ನಾಪತ್ತೆಯಾಗಿರುವ ಉಜಿರೆ ಸಮೀಪದ ಕಾಶಿಬೆಟ್ಟು ನಿವಾಸಿ ಸನತ್ ಶೆಟ್ಟಿ (20) ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಕೈಬರಹಗಳು ಹೊಸ ಆಯಾಮವನ್ನು ಸೃಷ್ಟಿಸಿದೆ.
ಯಾರೋ ಅನಾಮಿಕರ ಕೈಬರದ ಕಾಗದ ಇದಾಗಿದ್ದು ” ಪೊಲೀಸ್ ಅಧಿಕಾರಿಗೆ ನಿಮ್ಮ ಕಾರ್ಯಾಚರಣೆಯ ದಿಕ್ಕು ತಪ್ಪುತ್ತಿದೆ. ದುರಂತದಲ್ಲಿ ಕಾಣೆಯಾದ ಸನತ್ ಶೆಟ್ಟಿ ಜೊತೆ ಇದ್ದದ್ದು ಐದು ಜನ ಅಲ್ಲ. ಏಳು ಜನ. ಎಲ್ಲರನ್ನು ನಿಮ್ಮ ಭಾಷೆಯಲ್ಲಿ ವಿಚಾರಿಸಿ” ಎಂದು ಬರೆದು ಫಾಲ್ಸ್ ಗೆ ಹೋಗುವ ರಸ್ತೆಯಲ್ಲಿ ಎಸೆಯಲಾಗಿದೆ.
“ದುರಂತದ ಬಗ್ಗೆ ಎಲ್ಯಣ್ಣನನ್ನು ವಿಚಾರಿಸಿ ಈ ಜನರೆಲ್ಲ ನಕ್ಸಲ್ ನಂಟು ಇರುವವರು”.. “ಪಲ್ಸನಿ ಬಗ್ಗೆ ಸುಳ್ಳು ಹಳುತ್ತಿದ್ದಾರೆ ಸರಿಯಾಗಿ ವಿಚಾರಿಸಿ ಕುರ್ಚಾರುಕಟ್ಟೆ ಹೋಮ್ ಸ್ಟೇ ಶರತ್ ಕುಮಾರ್ ನನ್ನು ಸರಿಯಾಗಿ ವಿಚಾರಿಸಿ” ಹೀಗೆ ಬರೆದಿರುವ ಕೈಬರಹಗಳು ಸಿಕ್ಕಿರುವುದರಿಂದ ಸನತ್ ಶೆಟ್ಟಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಿನ ಜನತೆಗೆ ಇದ್ದ ಅನುಮಾನಕ್ಕೆ ಪುಷ್ಟಿ ಬಂದಂತಾಗಿದೆ.
ಕಳೆದ 20 ದಿನಗಳಿಂದ ನಿತ್ಯವೂ ನಡೆಯುತ್ತಿರುವ ಶೋಧ ಕಾರ್ಯದಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ದು, 30 ಅಡಿ ಆಳದವರೆಗೂ ಮಣ್ಣು, ಕಲ್ಲು ತೆರವು ನಡೆದಿದ್ದರೂ ಇದುವರೆಗೂ ನಾಪತ್ತೆಯಾದ ಯುವಕನ ಒಂದು ಸಣ್ಣ ಸುಳಿವು ಕೂಡ ಸಿಕ್ಕಿಲ್ಲ. ಬೆಳ್ತಂಗಡಿ ಪೊಲೀಸ್ ಠಾಣೆಯ ಎಸ್ಐ ನಂದಕುಮಾರ್ ನೇತೃತ್ವದಲ್ಲಿ ಪೊಲೀಸ್ ಇಲಾಖೆ, ಶಾಸಕ ಹರೀಶ್ ಪೂಂಜಾ. ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಹಿಂದೂ ಸಂಘಟನೆಗಳ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ, ಎಸ್ಡಿಆರ್ಎಫ್, ಅಗ್ನಿಶಾಮಕ ದಳ, ವನ್ಯಜೀವಿ ವಿಭಾಗ ಹಾಗೂ ಸಂಘ ಸಂಸ್ಥೆಗಳ ಸದಸ್ಯರು ಶೋಧ ಕಾರ್ಯಕ್ಕೆ ನೀಡಿದ್ದರು. ಸ್ಥಳದಲ್ಲಿ ಜನರೇಟರ್, ಟ್ರ್ಯಾಕ್ಟರ್ ಕಂಪ್ರೆಸರ್, ತುರ್ತು ಅಗತ್ಯದ ವಾಹನಗಳನ್ನು ಇರಿಸಿ ಶೋಧ ಕಾರ್ಯ ನಡೆಸಲಾಗಿತ್ತು.
ಫಾಲ್ಸ್ ಬಳಿ ಸನತ್ ಶೆಟ್ಟಿ ಜೊತೆ ತೆಗೆದ ಫೊಟೋಗಳು