ಉಡುಪಿ: ಸದಾ ಹೊಸದನ್ನು ಮಾಡುತ್ತಾ ಸಾಮಾಜಿಕ ಕಳಕಳಿ ಮೆರೆಯುವ ಉಡುಪಿಯ ಜಿಲ್ಲಾ ನಾಗರೀಕ ಸಮಿತಿ ಹಸುವಿಗೆ ಸೀಮಂತ ಮಾಡುವ ಮೂಲಕ ವಿಶಿಷ್ಟ ಕಾರ್ಯಕ್ರಮವೊಂದಕ್ಕೆ ನಾಂದಿ ಹಾಡಿದೆ.
ಮಣಿಪಾಲದ ಹೊಸಬೆಳಕು ಆಶ್ರಮದಲ್ಲಿ ಆಶ್ರಯ ಪಡೆದಿರುವ ‘ಗೌರಿ’ ಎಂಬ ಹಸುವಿಗೆ ಸೀಮಂತ ಶಾಸ್ತ್ರ ಕಾರ್ಯಕ್ರಮ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಹಾಗೂ ಹೊಸಬೆಳಕು ಸೇವಾ ಟ್ರಸ್ಟ್ ಅವರ ಸಹಯೋಗದಲ್ಲಿ ನಡೆಯಿತು.
‘ಗೌರಿ’ ಹೆಸರಿನ ಹಸು ಮಣಿಪಾಲದಲ್ಲಿ ನಡೆದ ಅಪಘಾತದಿಂದ ಗಂಭೀರ ಗಾಯಗೊಂಡಿತ್ತು. ವಾರಸುದಾರರು ಇಲ್ಲದ ಹಸು ಸದ್ಯ ಹೊಸಬೆಳಕು ಆಶ್ರಮದಲ್ಲಿ ಆಶ್ರಯ ಪಡೆದಿದೆ. ಇಲ್ಲಿಯೇ ಶಾಸ್ತ್ರೋಕ್ತವಾಗಿ ಸೀಮಂತ ಶಾಸ್ತ್ರವನ್ನು ಮಾಡಲಾಗಿದೆ.
ಇದೊಂದು ಬಲು ಅಪರೂಪದ ಕಾರ್ಯಕ್ರಮ ಮಾತ್ರವಲ್ಲ, ಗೋವಿನ ಬಯಕೆ ಈಡೇರಿಸುವ ಕಾರ್ಯಕ್ರಮವೂ ಹೌದು. ಗೌರಿ ಹಸುವಿಗೆ ಮನುಷ್ಯರಿಗೇ ಕಡಿಮ ಇಲ್ಲದಂತೆ ಸೀಮಂತ ಶಾಸ್ತ್ರ ನಡೆಸಲಾಯಿತು. ಗೌರಿಗೆ ಸ್ನಾನ ಮಾಡಿಸಿದ ಬಳಿಕ ಅಲಂಕಾರಗೊಳಿಸಿ ನಡಿಗೆ ಯಂತ್ರದ ಸಹಾಯದಿಂದ ಮಂಟಪಕ್ಕೆ ಕರೆತರಲಾಯಿತು.
ಹಸಿರು ಬಣ್ಣದ ಸೀರೆ ಉಡಿಸಿ, ರವಿಕೆ ಕಣ, ಅಕ್ಕಿ, ತೆಂಗಿನಕಾಯಿ ಮೊದಲಾದ ಸಾಮಗ್ರಿಗಳೊಂದಿಗೆ ಮಡಿಲು ತುಂಬಿಸಲಾಯಿತು. ಮೊಳಕೆ ಬರಿಸಿದ ನವಧಾನ್ಯಗಳು, ಹಿಂಡಿಗಳು ಹಾಗೂ ಬಯಕೆಯ ಖಾದ್ಯಗಳನ್ನು ಬಡಿಸಲಾಯಿತು. ಪಂಚ ಮುತ್ತೈದೆಯರು ಆರತಿಯನ್ನು ಸಹ ಬೆಳಗಿದರು.
ಈ ಕಾರ್ಯಕ್ರಮದಲ್ಲಿ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ಸದಸ್ಯರಾದ ಕೆ. ಬಾಲಗಂಗಾಧರ ರಾವ್, ತಾರಾನಾಥ್ ಮೇಸ್ತ ಶಿರೂರು, ಹೊಸಬೆಳಕು ಆಶ್ರಮದ ಸಂಚಾಲಕರಾದ ತನುಲಾ ತರುಣ್, ವಿನಯಚಂದ್ರ ಆಚಾರ್ಯ, ಮಾಂಡವಿ ಆಟೋ ನಿಲ್ದಾಣದ ಚಾಲಕರು ಉಪಸ್ಥಿತರಿದ್ದರು.