ಬೆಂಗಳೂರು: ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯರಾಗಿದ್ದ ಬಾಬುರಾವ್ ಚಿಂಚನಸೂರ್ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.ನಿನ್ನೆ ನೀಡಿರುವ ರಾಜೀನಾಮೆಯನ್ನು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಂಗೀಕರಿಸಿದ್ದಾರೆ.
ವಿಧಾನಸೌಧದಲ್ಲಿ ಸಭಾಪತಿ ಸಭಾಪತಿ ಕಚೇರಿಯಲ್ಲೇ ಸ್ವ ಹಸ್ತಾಕ್ಷರದ ಮೂಲಕ ರಾಜೀನಾಮೆ ಪತ್ರ ಬರೆದು ಸಲ್ಲಿಸಿದ್ದ ಚಿಂಚನಸೂರ್, ಕಲ್ಬುರ್ಗಿ ಜಿಲ್ಲೆಯ ಗುರುಮಿಠಕಲ್ ಕ್ಷೇತ್ರದಿಂದ ವಿಧಾನಸಭೆ ಟಿಕೆಟ್ ಕೇಳಿದ್ದರು.
ವಿಧಾನ ಪರಿಷತ್ ಸದಸ್ಯರಾಗಿರುವ ಕಾರಣ ಬಿಜೆಪಿ ಟಿಕೆಟ್ ನಿರಾಕರಿಸಿದ್ದರಿಂದ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಚಿಂಚನಸೂರ್ ರಾಜೀನಾಮೆ ಸಲ್ಲಿಸಿದ್ದಾರೆ.ಇಂದು ಚಿಂಚನಸೂರ್ ಕಾಂಗ್ರೆಸ್ ಸೇರ್ಪಡೆಯಾಗಲಿದ್ದು, ಇತ್ತೀಚೆಗೆ ಬಿಜೆಪಿ ವಿರುದ್ಧ ಸಿಟ್ಟಾಗಿ ಪಕ್ಷ ತೊರೆಯುವ ಹಂತಕ್ಕೆ ಹೋಗಿದ್ದ ಚಿಂಚನಸೂರ್ ರನ್ನು ಖುದ್ದು ಸಮಾಧಾನಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ಮುಂದೆ ಸರ್ಕಾರ ಬಂದಾಗ ಮಂತ್ರಿ ಸ್ಥಾನದ ಭರವಸೆ ನೀಡಿದ್ದರು.
ಫೆಬ್ರವರಿ 13 ರಂದು ಬಿಜೆಪಿ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರಿಯಾಂಕ್ ಖರ್ಗೆ ಸೋಲಿಸುವುದಾಗಿ ತೊಡೆ ತಟ್ಟಿದ್ದ ಚಿಂಚನಸೂರ್ ಈಗ ಬಿಜೆಪಿಗೆ ರಾಜೀನಾಮೆ ಸಲ್ಲಿಸಿದ್ದಾರೆ.ಒಂದೇ ವಾರದಲ್ಲಿ ಬಿಜೆಪಿಯ ಇಬ್ಬರು ವಿಧಾನ ಪರಿಷತ್ ಸದಸ್ಯರು ಗುಡ್ ಬೈ ಹೇಳಿದ್ದು, ಕಳೆದ ವಾರವಷ್ಟೇ ಬಿಜೆಪಿ ಎಂಎಲ್ಸಿ ಆಗಿದ್ದ ಪುಟ್ಟಣ್ಣ ಪಕ್ಷ ತ್ಯಜಿಸಿದ್ದರು.ವಿಧಾನ ಪರಿಷತ್ ಸದಸ್ಯರಿಗೆ ವಿಧಾನಸಭೆ ಟಿಕೆಟ್ ಇಲ್ಲ ಎಂಬ ಕಾರಣಕ್ಕೆ ಹೇಳಿದ ಪುಟ್ಟಣ್ಣ ಮತ್ತು ಬಾಬುರಾವ್ ಚಿಂಚನಸೂರ್ ಬಿಜೆಪಿ ತ್ಯಜಿಸಿದ್ದಾರೆ.


