ಮಂಗಳೂರು: ಮಂಗಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ನಡೆದ ಮೋದಿ ಬೃಹತ್ ಸಮಾವೇಶದಲ್ಲಿ ಭಾಗಿಯಾಗಲು ಪ್ರವೇಶ ಪಡೆಯಲು ಉದ್ಯಮಿ ಬಿ ಆರ್ ಶೆಟ್ಟಿ ಇಂದು ಹರಸಾಹಸ ಪಡಬೇಕಾಯಿತು.
ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಎಂಟ್ರಿಯಾಗಲು ಉದ್ಯಮಿ ಬಿ ಆರ್ ಶೆಟ್ಟಿ ಹರಸಾಹಸ ಪಡುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಾರ್ಯಕ್ರಮದ ಕೆಲವೇ ನಿಮಿಷ ಮೊದಲು ವಿಐಪಿ ಗ್ಯಾಲರಿ ಎಂಟ್ರಿಯಾಗಲು ಬಿ ಆರ್ ಶೆಟ್ಟಿ ಬಂದಿದ್ದರು. ಆದರೆ ಪಾಸ್ ಇಲ್ಲದ ಕಾರಣ ಪೊಲೀಸರು ಬಿ ಆರ್ ಶೆಟ್ಟಿ ಅವರಿಗೆ ಒಳಗೆ ಹೋಗಲು ಅವಕಾಶ ನೀಡಿಲ್ಲ.
ಈ ವೇಳೆ ಸ್ಥಳದಲ್ಲಿದ್ದ ಕೆಲವರು ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ನಮ್ಮನ್ನ ಬಿಡದಿದ್ದರೂ ಪರವಾಗಿಲ್ಲ, ಅವರನ್ನು ಒಳಗೆ ಬಿಡಿ, ಪ್ರಧಾನಿ ಮೋದಿಯನ್ನ ದುಬೈ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದ ಬಿ ಆರ್ .ಶೆಟ್ಟಿ ಅವರನ್ನು ಒಳಗೆ ಬಿಡದಿದ್ರೆ ಹೇಗೆ? ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊನೆಗೂ ಬಿ.ಆರ್.ಶೆಟ್ಟಿ ಎಂಟ್ರಿಗೆ ಪೊಲೀಸರು ಅವಕಾಶ ಕೊಟ್ಟಿದ್ದಾರೆ. ಸದ್ಯ ಆರ್ಥಿಕ ಕುಸಿತಕ್ಕೆ ಒಳಗಾಗಿ ಸಾಲದ ಹೊರೆಯಲ್ಲಿರುವ ಬಿ.ಆರ್.ಶೆಟ್ಟಿ ವರ್ಷಗಳ ಹಿಂದೆ ಪ್ರಧಾನಿ ಮೋದಿ ದುಬೈ ಕಾರ್ಯಕ್ರಮ ಆಯೋಜಿಸಿದ್ದರು.