ಉತ್ತರ ಪ್ರದೇಶ: ನನಗೆ ವಧು ಸಿಗುತ್ತಿಲ್ಲ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಯುಪಿ ಪೊಲೀಸರಿಗೆ ಪತ್ರ ಬರೆದಿದ್ದ ಮೂರು ಅಡಿ ಎರಡು ಇಂಚು ಎತ್ತರದ ಅಜೀಂ ಮನ್ಸೂರಿಗೆ ಕೊನೆಗೂ ಕಂಕಣ ಭಾಗ್ಯ ಕೂಡಿ ಬಂದಿದೆ.
ಈಗ ಅಜೀಂ ಅವರು ನವೆಂಬರ್ 7 ರಂದು ಅದ್ಧೂರಿ ಸಮಾರಂಭದಲ್ಲಿ ಬುಶ್ರಾ ಅವರನ್ನು ಮದುವೆಯಾಗಲಿದ್ದಾರೆ.
ಎರಡು ಅಡಿ ಎತ್ತರದ ಬುಶ್ರಾ, ಅಜೀಂ ಜೊತೆ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ. ಶಾಮ್ಲಿ ಜಿಲ್ಲೆಯ 27 ವರ್ಷದ ಅಜೀಂ ಮನ್ಸೂರಿ ಕೇವಲ 3 ಅಡಿ 2 ಇಂಚು ಎತ್ತರವಿರುವ ಕಾರಣದಿಂದ ಮದುವೆಯಾಗಲು ಯಾವ ಯುವತಿಯೂ ಮುಂದೆ ಬರಲಿಲ್ಲ. ಇದರಿಂದಾಗಿ ನೊಂದ ಯುವಕ ಸಹಾಯಕ್ಕಾಗಿ ಮಹಿಳಾ ಪೊಲೀಸ್ ಠಾಣೆಯ ಮೊರೆ ಹೋಗಿದ್ದಲ್ಲದೇ ಮಾಧ್ಯಮಗಳಲ್ಲೂ ಅಳಲು ತೋಡಿಕೊಂಡಿದ್ದರು.
ಈಗ ನನ್ನ ಕನಸು ನನಸಾಗುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ.ನನ್ನ ಮದುವೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಆಹ್ವಾನಿಸುತ್ತೇನೆ ಎಂದು ಅಜೀಂ ಹೇಳಿದ್ದಾರೆ.6 ಮಂದಿ ಸಹೋದರರಲ್ಲಿ ಒಬ್ಬನಾದ ಅಜೀಂರನ್ನು ಕುಬ್ಜನಾದ ಕಾರಣ ಮದುವೆಗೆ ಯಾರೂ ಮುಂದೆ ಬಂದಿರಲಿಲ್ಲ. ಇದರಿಂದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸೇರಿ, ಉನ್ನತಾಧಿಕಾರಿಗಳಿಗೂ ಪತ್ರ ಬರೆದು ಸಹಾಯ ಕೇಳಿದ್ದರು.