ಕೇರಳ: ಶಬರಿಮಲೆ ದೇಗುಲದ ಸ್ಕೈವಾಕ್ ಮೇಲಿಂದ ಹಾರಿ ಕನಕಪುರದ ಅಯ್ಯಪ್ಪ ಮಾಲಾಧಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಕನಕಪುರದ ಮದ್ದೂರಮ್ಮ ಬೀದಿ ನಿವಾಸಿ ಕುಮಾರ್ (40) ಮೃತ ದುರ್ದೈವಿ. ಮೃತ ಕುಮಾರ್ ಗಾರೆ ಕೆಲಸ ಮಾಡಿಕೊಂಡಿದ್ದರು. ಮೂರು ದಿನದ ಹಿಂದೆ ಕುಮಾರ್ ಸೇರಿ 6 ಮಂದಿ ಶಬರಿಮಲೆಗೆ ತೆರಳಿದ್ದರು. ಅಯ್ಯಪ್ಪನ ದರ್ಶನ ಪಡೆದ ಬಳಿಕ ದೇವಾಲಯದ ಸ್ಕೈವಾಕ್ ಶೆಲ್ಟರ್ ಮೇಲಿನಿಂದ ಜಿಗಿದು ಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕುಮಾರ್ ಅವರು ಸಂಜೆ 6:30 ರ ಸುಮಾರಿಗೆ ಫ್ಲೈಓವರ್ನ ಶೀಟ್ ಛಾವಣಿಯಿಂದ ಸುಮಾರು 20 ಅಡಿ ಎತ್ತರದಿಂದ ಜಿಗಿದಿದ್ದಾರೆ. ಈ ವೇಳೆ ಅವರ ಕಾಲು ಮತ್ತು ಕೈಗೆ ಗಂಭೀರ ಗಾಯಗಳಾಗಿತ್ತು. ಕೂಡಲೇ ಅವರನ್ನು ಶಬರಿಮಲೆಯಲ್ಲಿರುವ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿತ್ತು, ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೊಟ್ಟಾಯಂ ವೈದ್ಯಕೀಯ ಕಾಲೇಜಿಗೆ ಸಾಗಿಸುವಾಗ, ಅವರು ಹೃದಯಾಘಾತಕ್ಕೆ ಒಳಗಾಗಿದ್ದರು. ಕೊಟ್ಟಾಯಂನ ಕಂಜಿರಪಲ್ಲಿಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಸಾವು ದೃಢಪಟ್ಟಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆ ಸಂಬಂಧ ಶಬರಿಮಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಕುಮಾರ್ ಕುಟುಂಬಸ್ಥರು ಶಬರಿಮಲೆಗೆ ತೆರಳಿದ್ದಾರೆ.