ಸುರತ್ಕಲ್: ಟೋಲ್ ಗೇಟ್ ಮುಚ್ಚುವಂತೆ ಆಗ್ರಹಿಸಿ ಕೆಲವು ದಿನಗಳಿಂದ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಾಮಾಜಿಕ ಕಾರ್ಯಕರ್ತ ಆಸೀಫ್ ಆಪತ್ಬಾಂಧವನ ಮೇಲೆ ಮಂಗಳಮುಖಿಯರು ಹಲ್ಲೆಗೆ ಯತ್ನ ನಡೆಸಿದ್ದಾರೆ.
ಸ್ಥಳೀಯ ಆಡಳಿತದ ಗಮನ ಸೆಳೆಯುವ ಸಲುವಾಗಿ ಆಸಿಫ್ ನಿರಂತರ ಪ್ರತಿಭಟನೆ ನಡೆಸುತ್ತಿದ್ದರು, ಅದರಂತೆ ಕಳೆದ ಮಧ್ಯರಾತ್ರಿ ಪ್ರತಿಭಟನೆಯಲ್ಲಿ ನಿರತರಾಗಿದ್ದ ಆಸಿಫ್ ಅವರ ಬಳಿ ಇಬ್ಬರು ಮಂಗಳಮುಖಿಯರು ಆಗಮಿಸಿದ್ದರು, ಸ್ವಲ್ಪ ಸಮಯದ ನಂತರ ಮಂಗಳಮುಖಿಯರ ತಂಡ ಆಗಮಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಮಂಗಳಮುಖಿಯರು ಹಲ್ಲೆಗೆ ಯತ್ನ ನಡೆಸಿದ ಕೂಡಲೇ ಆಸೀಫ್ ಫೇಸ್ ಬುಕ್ ಲೈವ್ ವೀಡಿಯೋ ಮಾಡಿದ್ದು, ಈ ವೇಳೆ ಕೆಲ ಮಂಗಳಮುಖಿಯರು ಬಟ್ಟೆ ಎತ್ತಿ ನರ್ತನ ಪ್ರಾರಂಭಿಸಿದ್ದಾರೆ.
ಹಲ್ಲೆ ನಡೆದ ವಿಷಯ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಇನ್ನು ಪ್ರತಿಭಟನಾ ವೇದಿಕೆಯನ್ನು ನಾಳೆಯೇ ಹಾಳುಮಾಡುತ್ತೇವೆ, ನಿಮ್ಮನ್ನು ಇಲ್ಲಿಂದ ನಾವು ಓಡಿಸುತ್ತೇವೆ. ಅಲ್ಲದೆ ನಾಳೆ ನಿಮ್ಮನ್ನು ಸುರತ್ಕಲ್ ಪೊಲೀಸ್ ಸ್ಟೇಷನ್ ನಲ್ಲಿ ಕೂರಿಸುತ್ತೇವೆ ಎಂದು ಮಂಗಳಮುಖಿಯರು ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.