ಬೆಳ್ತಂಗಡಿ : ನಾಲ್ಕು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪದ ಮೇಲೆ ಓರ್ವನ ಮೇಲೆ ಹಲ್ಲೆ ಮಾಡಿದ್ದು ಇದನ್ನು ತಡೆಯಲು ಬಂದ ಸಂಬಂಧಿಕನೊಬ್ಬ ಮೇಲೂ ಹಲ್ಲೆ ಮಾಡಿದ್ದು ಆಸ್ಪತ್ರೆಗೆ ಸಾಗಿಸುವ ವೇಳೆ ಓರ್ವ ಸಾವನ್ನಪ್ಪಿರುವ ಘಟನೆ ಇಂದಬೆಟ್ಟು ಗ್ರಾಮದ ಪರಾರಿ ಶಾಂತಿನಗರ ಎಂಬಲ್ಲಿ ಶುಕ್ರವಾರ ಸಂಜೆ ಘಟನೆ ನಡೆದಿದೆ.
ಘಟನೆ ವಿವರ: ಬೆಳ್ತಂಗಡಿ ತಾಲೂಕಿನ ಪರಾರಿ ಶಾಂತಿನಗರದಲ್ಲಿ ನಾರಾಯಣ ನಾಯ್ಕ್(47) ಎಂಬವರು ಬೀಡಿ ಕೊಟ್ಟು ವಾಪಸ್ ಬರುವಾಗ ಶಾಂತಿನಗರ ಆಟದ ಮೈದಾನದಲ್ಲಿ ಯುವಕರ ಗುಂಪು ಅಡ್ಡಹಾಕಿ ನೀನು ನಾಲ್ಕು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದೀಯಾ ಎಂದು ಹೇಳಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ . ಇದನ್ನು ಪಕ್ಕದಲ್ಲಿ ನೋಡಿದ ನಾರಾಯಣ ನಾಯ್ಕ್ ಅವರ ಹೆಂಡತಿಯ ಅಕ್ಕನ ಗಂಡ ಜಾರಪ್ಪ ನಾಯ್ಕ್ (55) ಹಲ್ಲೆಯನ್ನು ತಪ್ಪಿಸಲು ಬಂದಾಗ ಅವರಿಗೂ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಈ ವೇಳೆ ಗಂಭೀರ ಗಾಯಗೊಂಡಿದ್ದ ಜಾರಪ್ಪ ನಾಯ್ಕ್ ಮತ್ತು ನಾರಾಯಣ ನಾಯ್ಕ್ ಇಬ್ಬರು ಅಸ್ವಸ್ಥರಾಗಿ ಬಿದ್ದಿದ್ದರು. ಈ ಬಗ್ಗೆ ಸ್ಥಳೀಯರು ಮನೆಯವರಿಗೆ ಮಾಹಿತಿ ತಿಳಿಸಿದಾಗ ಜಾರಪ್ಪ ಅವರ ಮೊದಲ ಮಗ ರಾಜಶೇಖರ್ ಬಂದು ವಾಹನದಲ್ಲಿ ಉಜಿರೆ ಖಾಸಗಿ ಆಸ್ಪತ್ರೆಗೆ ಕರೆತರುತ್ತಿದ್ದಾಗ ದಾರಿ ಮಧ್ಯೆ ಹೃದಯಾಘಾತದಿಂದ ಜಾರಪ್ಪ ನಾಯ್ಕ್ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ನಂತರ ಮೃತದೇಹವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದು ನಾರಾಯಣ ನಾಯ್ಕ್ ಅವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಲ್ಲೆ ಮಾಡಿದವರ ವಿವರ: ಇನ್ನೂ ಇಬ್ಬರ ಮೇಲೆ ಹಲ್ಲೆ ಮಾಡಿದವರು ಸ್ಥಳೀಯ ನಿವಾಸಿಗಳಾದ ಮನೋಹರ್ , ಚಂದ್ರಕಾಂತ್ ನಾಯ್ಕ್, ದೀಪಕ್ ರೈ, ಹರಿಪ್ರಸಾದ್,ವಿಜಯ್ ,ವೈಶಾಲಿ ಮತ್ತಿತರರು ಎನ್ನಲಾಗಿದೆ.
ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಸಾವನ್ನಪ್ಪಿರುವ ಜಾರಪ್ಪ ನಾಯ್ಕ್ ಅವರ ಮೊದಲ ಮಗ ರಾಜಶೇಖರ್ ದೂರು ನೀಡಿದ್ದಾರೆ.
ಆಸ್ಪತ್ರೆಗೆ ಬಿಜೆಪಿ ಯುವ ಮೋರ್ಚಾ ಸದಸ್ಯರಾದ ಪ್ರಶಾಂತ್ , ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ವಥ್ ರಾಜ್ ಮತ್ತಿತರರು ಭೇಟಿ ನೀಡಿದ್ದಾರೆ.