ಬೆಳ್ತಂಗಡಿ : ಉಡುಪಿ ಜಿಲ್ಲೆಯ ಶಂಕರನಾರಾಯಣ ಪೊಲೀಸ್ ಠಾಣೆಯ ಹೆಡ್ ಕಾನ್ಟೇಬಲ್ ನಾರಾಯಣ ಗೌಡ ಮತ್ತು ಪಿಸಿ ಲೋಹಿತ್ ಇಬ್ಬರು ಪೊಲೀಸರು ಕುಂದಾಪುರ ಕೋರ್ಟ್ ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿಯ ಅಬ್ದುಲ್ ಲತೀಫ್ ಯಾನೆ ಕೋಟಿ ಲತೀಫ್ ಗೆ ವಾರೆಂಟ್ ಜಾರಿಯಾಗಿದ್ದರಿಂದ ಮಾಹಿತಿ ನೀಡಲು ದಿನಾಂಕ 08/04/2022 ರಂದು ಸಂಜೆ 4:30 ರ ಸುಮಾರಿಗೆ ಬೆಳ್ತಂಗಡಿ ತಾಲೂಕಿನ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಿಲ್ಯ ಗ್ರಾಮದ ಗೋಳಿಕಟ್ಟೆ ಬಂದಾಗ ಆರೋಪಿ ಅಬ್ದುಲ್ ಲತೀಫ್ ಮತ್ತು ಇತರರು ಸೇರಿ ಇಬ್ಬರ ಮೇಲೆ ಹಲ್ಲೆ ಮಾಡಿ ಬೆದರಿಕೆ ಹಾಕಿದ್ದರು ಈ ಬಗ್ಗೆ ವೇಣೂರು ಠಾಣೆಯಲ್ಲಿ ಶುಕ್ರವಾರ ರಾತ್ರಿ ಪ್ರಕರಣ ದಾಖಲಾಗಿತ್ತು. ವೇಣೂರು ಪೊಲೀಸರು ಕಾರ್ಯಚರಣೆ ನಡೆಸಿ ಶನಿವಾರ ಪ್ರಮುಖ ಆರೋಪಿಯೊಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಬ್ಬರು ಪೊಲೀಸರ ಮೇಲೆ ಹಲ್ಲೆ ಪ್ರಕರಣ ಸಂಬಂಧಿಸಿದಂತೆ ವೇಣೂರು ಪೊಲೀಸ್ ಠಾಣಾ ಪಿಎಸ್ಐ ಸೌಮ್ಯ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿ ಅಬ್ದುಲ್ ಲತೀಫ್ ಯಾನೆ ಕೋಟಿ ಲತೀಫ್ (40)ನನ್ನು ಶನಿವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.