ಉಳ್ಳಾಲ: ಕಳೆದ ಕೆಲವು ದಿನಗಳ ಹಿಂದೆ ನಡೆದ ವಿಶ್ವ ಹಿಂದು ಪರಿಷತ್ ಮುಖಂಡನಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಆಸಿಫ್ ಪ್ರಯಾಣಿಸುತ್ತಿದ್ದ ಕಾರನ್ನು ಅಗಂತುಕರು ಹಿಂಬಾಲಿಸಿ ತಲವಾರು ದಾಳಿ ನಡೆಸಿದ್ದು, ಈ ಕುರಿತಂತೆ ಉಳ್ಳಾಲ ಠಾಣೆಯಲ್ಲಿ ಭಾನುವಾರ ಎಫ್ಐಆರ್ ದಾಖಲಾಗಿದೆ.
ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕೆ.ಸಿ.ರೋಡ್- ಉಚ್ಚಿಲದ ಪೆಟ್ರೋಲ್ ಬಂಕ್ ಬಳಿ ಹೆಲ್ಮೆಟ್ ಧಾರಿಗಳ 8 ಮಂದಿಯ ಗುಂಪೊಂದು ಕಾರಿನತ್ತ ತಲವಾರು ಬೀಸಿ, ಹಲ್ಲೆಗೆ ಯತ್ನಿಸಿದ್ದು ಈ ವೇಳೆ ಅವರ ಬಳಿ ಮೊಟ್ಟೆಗಳು ಕೂಡ ಇತ್ತು ಎನ್ನಲಾಗಿದೆ. ದುಷ್ಕರ್ಮಿಗಳು ಬೀಸಿದ ತಲವಾರು ಆಸೀಫ್ ಇದ್ದ ಕಾರಿಗೆ ತಗುಲಿದ್ದು, ಗಾಜಿಗೆ ಹಾನಿಯಾಗಿದೆ. ಈ ವೇಳೆಯಲ್ಲಿ ಆಸೀಫ್ ಅವರ ಕಾರಿನ ಚಾಲಕ ವೇಗವಾಗಿ ವಾಹನ ಚಲಾಯಿಸಿದ್ದು, ಕಾರು ತಲಪಾಡಿ ಟೋಲ್ಗೇಟ್ ಬಳಿಯ ಬ್ಯಾರಿಕೇಡ್ಗೆ ಗುದ್ದಿರುತ್ತದೆ. ಬಳಿಕ ಮಂಜೇಶ್ವರ ಠಾಣೆಗೆ ತೆರಳಿ ಅವರು ರಕ್ಷಣೆ ಕೋರಿದ್ದರು ಎಂದು ಮೂಲಗಳಿಂದ ತಿಳಿದಿದೆ.
ಪ್ರಕರಣದ ವಿವರ: ಅ.17 ರಂದು ತೊಕ್ಕೊಟ್ಟು ಓವರ್ ಬ್ರಿಡ್ಜ್ ಸಮೀಪ ಅಪಘಾತ ಸಂಭವಿಸಿದ್ದು, ಘಟನೆಯ ಸಂಬಂಧ ಹಿಂದೂ ಮುಖಂಡ ಅರ್ಜುನ್ ಮಾಡೂರು ಮೇಲೆ ಕೇರಳ ಹೊಸಂಗಡಿಯ ಆಸೀಫ್ ಹಲ್ಲೆ ನಡೆಸಿದ್ದರು. ಇದರಿಂದಾಗಿ ತೀವ್ರ ಆಕ್ರೋಶಗೊಂಡ ಹಿಂದೂ ಸಂಘಟನೆಗಳ ಕಾರ್ಯಕರ್ತರು ಉಳ್ಳಾಲ ಠಾಣೆ ಮುಂದೆ ಜಮಾಯಿಸಿ ಪ್ರತಿಭಟಿಸಿದ್ದರು. ಬಳಿಕ ಆರೋಪಿ ಆಸೀಫ್ನನ್ನು ಪೊಲೀಸರು ಬಂಧಿಸಿದ್ದರು.
ಆರೋಪಿ ಆಸೀಫ್ ಗೆ ಗುರುವಾರ ಜಾಮೀನು ಸಿಕ್ಕಿದ್ದು, ಮಂಗಳೂರು ಜೈಲಿನಿಂದ ಬಿಡುಗಡೆಗೊಂಡು ಕಾರಿನಲ್ಲಿ ಕೇರಳದ ಹೊಸಂಗಡಿಯ ಮನೆಗೆ ತೆರಳುವಾಗ ಆತನ ಕಾರಿನ ಮೇಲೆ ದಾಳಿ ನಡೆದಿದೆ ಎನ್ನಲಾಗಿದೆ.


