ಸುಳ್ಯ: ರೈತರು ಎದುರಿಸುವ ವಿವಿಧ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಸುಳ್ಯ ತಾಲೂಕು ರೈತ ಸಂಘ ಒತ್ತಾಯಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಾಲೂಕು ರೈತ ಸಂಘದ ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು, ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದರು. ಸರಕಾರದಿಂದ ಘೋಷಣೆಯಾಗಿರುವ 2018-19ನೇ ಸಾಲಿನ ಸಾಲ ಮನ್ನಾ ಯೋಜನೆಯ ಬಾಕಿಯನ್ನು ಶೀಘ್ರ ಬಿಡುಗಡೆ ಮಾಡಬೇಕು. ಸುಳ್ಯ ತಾಲೂಕಿನಲ್ಲಿ 700 ಮಂದಿಗೆ ಬಾಕಿ ಇದೆ ಎಂದರು.
ಹಾಗೇ ರೈತರ ಪಹಣಿ ಪತ್ರಿಕೆಯಲ್ಲಿ ಮೊಬೈಲ್ ತಂತ್ರಾಂಶದ ಮೂಲಕ ರೈತರು ಒಮ್ಮೆ ದಾಖಲಿಸಿದ ಬೆಳೆಯನ್ನು ಸಂಬಂಧಪಟ್ಟ ರೈತನ ಗಮನಕ್ಕೆ ತಾರದೆ ಸೂಕ್ತ ಪರಿಶೀಲನೆ ನಡೆಸದೆ ಬೇಕಾಬಿಟ್ಟಿ ತಿದ್ದುಪಡಿ ಮಾಡಬಾರದು, ಬಹು ವಾರ್ಷಿಕ ಬೆಳೆಗಳನ್ನು ಬೆಳೆಯುವ ಪ್ರದೇಶಗಳಲ್ಲಿ ಪ್ರತೀ ವರ್ಷ ಬೆಳೆ ದಾಖಲಿಸುವ ಪದ್ಧತಿಯನ್ನು ಕೈ ಬಿಡಬೇಕು. ಯಶಸ್ವಿನಿ ಯೋಜನೆಯನ್ನು ಮರು ಜಾರಿಗೊಳಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ನೂಜಾಲು ಪದ್ಮನಾಭ ಗೌಡ, ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್ ಕೆ, ಮಂಜುನಾಥ ಮಡ್ತಿಲ, ಪೆರಾಜೆ ಗ್ರಾಮ ಸಮಿತಿಯ ಉಪಾಧ್ಯಕ್ಷ ಗೋಪಾಲ್ ಪೆರಾಜೆ ಉಪಸ್ಥಿತರಿದ್ದರು.