ಬೆಂಗಳೂರು: ತಮ್ಮ ತಂದೆ ಚಿಕ್ಕ ವಯಸ್ಸಿನಲ್ಲೇ ನಮ್ಮಿಂದ ದೂರವಾದರು ಅನ್ನೋದನ್ನು ಅನುಶ್ರೀ ಅನೇಕ ಬಾರಿ ಹೇಳಿಕೊಂಡಿದ್ದರು. ಅಲ್ಲದೇ ಕಷ್ಟದ ದಿನಗಳನ್ನು ನೆನದು ಸಂದರ್ಶನಗಳಲ್ಲಿ ಕಣ್ಣೀರು ಕೂಡ ಹಾಕಿದ್ದರು. ಇದೀಗ ಅನುಶ್ರೀ ತಂದೆ ಸಂಪತ್ ಕುಮಾರ್ ಮತ್ತೆ ಹಿಂತಿರುಗಿದ್ದು ಮಗಳನ್ನು ನೋಡಲು ಪರಿತಪಿಸುತ್ತಿದ್ದಾರೆ.
ಪಾರ್ಶುವಾಯುವಿಗೆ ತುತ್ತಾಗಿರುವ ಅನುಶ್ರೀ ತಂದೆ ಸಂಪತ್ ಕುಮಾರ್ ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ತುಂಬಾ ಗಂಭೀರವಾಗಿದೆ. ಇಂತಹ ಸ್ಥಿತಿಯಲ್ಲಿ ಅವರು ಮಗಳನ್ನು ನೋಡುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಸಂಪತ್ ಕುಮಾರ್ ಅವರು ತನ್ನ ಮಗಳ ಬಗ್ಗೆ ಬೇಸರದ ಮಾತುಗಳನ್ನಾಡಿದ್ದಾರೆ. 1998 ರ ವರೆಗೂ ನಾನು ನನ್ನ ಫ್ಯಾಮಿಲಿ ಜೊತೆ ಇದ್ದೆ. ಆದರೆ ನನಗೆ ನನ್ನ ಕುಟುಂಬದಲ್ಲಿ ಪ್ರಾಮುಖ್ಯತೆ ಕೊಟ್ಟಿಲ್ಲ ಎಂಬ ಕಾರಣದಿಂದ ಕುಟುಂಬವನ್ನು ಬಿಟ್ಟು ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದೇನೆ. ನ್ಯೂಜಿಲ್ಯಾಂಡ್, ಶ್ರೀಲಂಕಾ, ದುಬೈ ಹೀಗೆ ಹೀಗೆ ಬೇರೆ ಬೇರೆ ಕಡೆ ಜೀವನ ಸಾಗಿಸಿಕೊಂಡು ಇಷ್ಟು ದಿನ ನಾನು ರಾಯಲ್ ಆಗಿ ಇದ್ದೆ. ಇದೀಗ ನನಗೆ ಅನಾರೋಗ್ಯ ಸಮಸ್ಯೆ ಕಾಡುತ್ತಿದೆ. ಈಗ ನನ್ನ ಟೈಮ್ ಸರಿಯಿಲ್ಲ. ಕೆಟ್ಟ ಕಾಲವನ್ನು ಎದುರಿಸಬೇಕಾದ ಪರಿಸ್ಥಿತಿ ಬಂದಿದೆ.
ಹಿಂದೆಂದೂ ಕೂಡ ನಾನು ಅನುಶ್ರೀ ತಂದೆ ಎಂದು ಹೇಳಿಕೊಂಡಿಲ್ಲ. ನನ್ನ ಮಗಳು ತುಂಬಾ ಕಷ್ಟಪಟ್ಟು ಹೆಸರು ಕೀರ್ತಿಯನ್ನು ಗಳಿಸಿದ್ದಾಳೆ. ನನ್ನ ಮಗಳ ಹೆಸರಿಗೆ ಧಕ್ಕೆ ಬರಬಾರದು ಎಂದು ನಾನು ಎಲ್ಲಿಯೂ ಕೂಡ ಸತ್ಯ ಬಾಯ್ಬಿಟ್ಟಿರಲಿಲ್ಲ. ನಾನು ಆಸ್ಪತ್ರೆಯಲ್ಲಿ ಹಾಸಿಗೆ ಹಿಡಿದಿದ್ದರೂ ಕೂಡ ನನ್ನ ಮಗಳು ನನ್ನನ್ನು ನೋಡಲಿಕ್ಕೆ ಬಂದಿಲ್ಲ. ಅವಳು ನನ್ನನ್ನು ನೋಡಲಿಕ್ಕೆ ಬರದೇ ಇದ್ದರೂ ನನಗೆ ಬೇಜಾರಿಲ್ಲ. ಆದರೆ ನಾನು ತೀರಿಕೊಂಡ ಮೇಲೆ ಮಣ್ಣು ಹಾಕಿದರೆ ಸಾಕು. ಹಾಗೆ ಅನುಶ್ರೀ ನನ್ನ ಬಗ್ಗೆ ಹೇಳಿಕೊಳ್ಳಬಹುದಿತ್ತು. ಆದರೆ ಆಕೆ ನನ್ನ ಬಗ್ಗೆ ಹೇಳಿಕೊಳ್ಳದೆ ಸಿಂಪತಿಯನ್ನು ಗಿಟ್ಟಿಸಿಕೊಳ್ಳುತ್ತಿದ್ದಾಳೆ ಎಂದು ಮಗಳ ಬಗ್ಗೆ ಮಾಧ್ಯಮದ ಮುಂದೆ ಅಸಮಾಧಾನ ಹೊರ ಹಾಕಿದ್ದಾರೆ.