ಪುತ್ತೂರು: ಬೇಸಗೆಯ ಬಿಸಿಲು ಧಗ ಧಗಿಸುತ್ತಿರುವ ಹಿನ್ನೆಲೆಯಲ್ಲಿ ಎಳೆ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವ ಕಾರಣದಿಂದ ಕೆಲವು ಜಿಲ್ಲೆಗಳ ಅಂಗನವಾಡಿ ಕೇಂದ್ರಗಳಿಗೆ ಸೀಮಿತ ವಾಗಿದ್ದ ದೀರ್ಘ ರಜಾ ಅವಧಿಯನ್ನು ಎಲ್ಲ ಜಿಲ್ಲೆಗಳಿಗೂ ಅನ್ವಯಿಸಲಾಗಿದೆ.
ಅಂಗನವಾಡಿ ಕೇಂದ್ರಗಳಿಗೆ ಇದೇ ಮೊದಲ ಬಾರಿಗೆ ಗರಿಷ್ಠ ರಜೆ ಘೋಷಿಸಲಾಗಿದೆ. ಹೀಗಾಗಿ ಬಿಸಿಲಿನ ಧಗೆಯಲ್ಲಿ ಮಕ್ಕಳು ಅಂಗವಾಡಿಗೆ ಹೋಗಿಬರುವ ಸಂಕಷ್ಟದಿಂದ ಪಾರಾಗಿದ್ದಾರೆ.
ರಜೆ ಆರಂಭ; ಪ್ರತೀ ವರ್ಷದಂತೆ ಈ ಬಾರಿಯು 15 ದಿನಗಳ ಅವಧಿಗೆ ಅಂಗನವಾಡಿಗಳಿಗೆ ರಜೆ ನೀಡಲು ನಿರ್ಧರಿಸಲಾಗಿತ್ತು. ಆದರೆ ಪುಟಾಣಿಗಳ ಹಿತದೃಷ್ಟಿಯಿಂದ ಸಮಯ ಪರಿಷ್ಕರಿಸಿ ಎ. 15ರಿಂದ ಮೇ 26ರ ತನಕ ಬೇಸಗೆ ರಜೆ ಘೋಷಿಸಲಾಗಿದೆ. ಅಂದರೆ ಒಟ್ಟು 41 ದಿನಗಳ ರಜೆ ದೊರೆತಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಎ. 15ರಿಂದ ಮೇ 11ರ ತನಕ 8ರಿಂದ ಮಧ್ಯಾಹ್ನ 12 ಗಂಟೆ ತನಕ ಕೇಂದ್ರಗಳಲ್ಲಿ ಇರುವಂತೆ ಸೂಚನೆ ನೀಡಲಾಗಿದ್ದು ಮೇ 11 ರಿಂದ 26 ರ ತನಕ ಅಂಗನವಾಡಿ ಸಿಬಂದಿ ಗಳಿಗೆ ರಜೆ ಘೋಷಿಸಲಾಗಿದೆ.