ಕಾಸರಗೋಡು: ಕಳೆದ 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಡಿಕೇರಿ ಮೂಲದ ಅಂತಾರಾಜ್ಯ ದರೋಡೆಕೋರನೋರ್ವನನ್ನು ಬಂಧಿಸುವಲ್ಲಿ ಕಾಸರಗೋಡು ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಮಡಿಕೇರಿ ಸೋಮವಾರ ಪೇಟೆಯ ಉಂಬಾಯಿ ಯಾನೆ ಇಬ್ರಾಹಿಂ (46) ಎಂದು ಗುರುತಿಸಲಾಗಿದೆ. ಈತ ನೂರಕ್ಕೂ ಅಧಿಕ ಕಳವು ಪ್ರಕರಣ ಆರೋಪಿಯಾಗಿದ್ದಾನೆ.
ಕೇರಳ, ತಮಿಳುನಾಡು, ಕರ್ನಾಟಕ ಮೊದಲಾದೆಡೆಗಳಲ್ಲಿ ನೂರಕ್ಕೂ ಅಧಿಕ ಕಳವು ಪ್ರಕರಣಗಳಲ್ಲಿ ಈತ ಶಾಮೀಲಾಗಿದ್ದ. ನ್ಯಾಯಾಲಯ ಈತನನ್ನು ತಲೆಮರೆಸಿಕೊಂಡ ಆರೋಪಿಯೆಂದು ಘೋಷಿಸಿತ್ತು. ಈತ ವಯನಾಡಿನ ತಿರುನೆಲ್ಲಿ ಎಂಬಲ್ಲಿ ಹುಸೈನ್ ಎಂಬ ಹೆಸರಿನಲ್ಲಿ ತಲೆಮರೆಸಿಕೊಂಡಿದ್ದನು. ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.
ಕುಖ್ಯಾತ ವಾಹನ ಕಳವು ಚೋರ ಶ್ರೀಧರ ಶೆಟ್ಟಿಯ ಸಹಚರನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗೋವಾ, ಮಹಾರಾಷ್ಟ್ರ ಹಾಗೂ ಇನ್ನಿತರ ಕಡೆಗಳಲ್ಲಿ ತಲೆ ಮರೆಸಿಕೊಂಡಿದ್ದ ಈತನ್ನು ಬಂಧಿಸಲು ದಾಳಿ ನಡೆಸಿದಾಗ ತಪ್ಪಿಸಿ ಪರಾರಿಯಾಗಿದ್ದ.