ಕಾರ್ಕಳ: ಜಾನುವಾರುಗಳಲ್ಲಿ ಸಾಂಕ್ರಾಮಿಕ ಕಾಲುಬಾಯಿ ರೋಗ ಹರಡುತ್ತಿದ್ದು ಈಗಾಗಲೇ ಹಲವು ಜಾನುವಾರುಗಳು ಬಲಿಯಾಗಿದೆ. ಈ ಬಗ್ಗೆ ಕಾರ್ಕಳದಲ್ಲಿ ಪಶು ಇಲಾಖೆಯ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
ಕಾರ್ಕಳ ನಗರ, ತೆಳ್ಳಾರು, ಮಿಯಾರು, ದುರ್ಗಾ ಆಸುಪಾಸಿನಲ್ಲಿ ಐವತ್ತಕ್ಕೂ ಅಧಿಕ ಜಾನುವಾರುಗಳು ಈ ಕಾಲುಬಾಯಿ ರೋಗಕ್ಕೆ ಬಲಿಯಾಗಿವೆ. ಜಾನುವಾರಿನ ನಾಲಗೆಯಲ್ಲಿ ಹುಣ್ಣು ಮತ್ತು ಗೊರಸಿನ ಸಂಧಿಯಲ್ಲಿ ಹುಳುಗಳು ಕಾಣಿಸಿಕೊಳ್ಳುತ್ತಿದ್ದು, ಬಾಯಲ್ಲಿ ಆಗಿರುವ ಹುಣ್ಣಿನಿಂದ ಆಹಾರ ಸೇವಿಸಲು ಆಗದೆ ಯಾತನೆ ಪಡುತ್ತಿವೆ. ಇದರಿಂದಾಗಿ ಆಹಾರ ಸೇವಿಸದೆ ಹಸಿವಿನಿಂದ ಜೀವ ಬಿಡುತ್ತಿವೆ. ಅದರಲ್ಲೂ ಗಬ್ಬದ, ಹಾಲು ಕರೆಯುವ ದನಗಳು ಪ್ರಾಣ ಬಿಡುತ್ತಿರುವುದು ಹೈನುಗಾರರನ್ನು ಕಂಗೆಡಿಸಿದೆ. ಇದೀಗ ಖಾಸಗಿ ವೈದ್ಯರನ್ನು ಕರೆಯಿಸಿ ಸ್ವಂತ ಖರ್ಚಿನಿಂದ ಔಷಧೋಪಚಾರ ಮಾಡುತ್ತಿದ್ದಾರೆ.
ತಾಲೂಕಿನಲ್ಲಿ ಇಷ್ಟೊಂದು ಪ್ರಕರಣ ಪತ್ತೆಯಾಗುತ್ತಿದ್ದರೂ ಪಶು ಇಲಾಖೆ ನಿರ್ಲಕ್ಷ್ಯ ತೋರಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.