ಇನ್ನೇನು ಹಬ್ಬಗಳ ಸರದಿ ಆರಂಭವಾಗುತ್ತಿದ್ದು, ಈ ಬಾರಿ ಗಣೇಶ ಹಬ್ಬಕ್ಕೆ ಕೆಎಸ್ಸಾರ್ಟಿಸಿ ಬಸ್ಗಳಲ್ಲಿ ಊರಿಗೆ ಬರಲು ಪ್ರಯಾಣಿಕರಿಂದ ಬೇಡಿಕೆ ಕಡಿಮೆಯಾಗುತ್ತಿದೆ. ಏಕೆಂದರೆ, ಕೊರೊನಾ ಕಾರಣದಿಂದಾಗಿ ಹಲವು ಮಂದಿ ವರ್ಕ್ ಫ್ರಂ ಹೋಂ ಪರಿಕಲ್ಪನೆಯಲ್ಲಿ ಮನೆಯಿಂದಲೇ ಕೆಲಸ ಮಾಡುತ್ತಿರುವುದು ಪ್ರಮುಖ ಕಾರಣ.
ಅದೇ ರೀತಿ, ಈ ಬಾರಿಯ ಗಣೇಶ ಹಬ್ಬ ಶುಕ್ರವಾರ ಬರುವ ಕಾರಣ, ಶನಿವಾರ ಮತ್ತು ರವಿವಾರದಂದು ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ. ಹೀಗಿದ್ದಾಗ ಊರಿಗೆ ಬಂದರೆ ಮನೆಯಲ್ಲೇ ಕೂರಬೇಕು ಎಂಬ ಕಾರಣ ದೂರದ ಊರಿನಲ್ಲಿರುವ ಕರಾವಳಿಗರು ತಾವಿದ್ದ ಪ್ರದೇಶದಲ್ಲೇ ಹಬ್ಬ ಆಚರಿಸಲು ಮುಂದಾಗಿದ್ದಾರೆ. ಇನ್ನೊಂದೆಡೆ, ಕೊರೊನಾ ಆತಂಕ ಹಾಗೂ ಕರ್ಫ್ಯೂ ಮುಂತಾದ ಕಿರಿಕಿರಿ ತಪ್ಪಿಸುವುದಕ್ಕೆ ಬಸ್ಗಳ ಬದಲಾಗಿ ತಮ್ಮ ಸ್ವಂತ ವಾಹನಗಳಲ್ಲೇ ಹಬ್ಬಕ್ಕೆ ಊರಿಗೆ ಬಂದು ಹೋಗಲು ತೀರ್ಮಾನಿಸಿದ್ದಾರೆ. ಈ ಎಲ್ಲ ಕಾರಣಗಳಿಗೆ ಪ್ರಯಾಣಿಕರಿಂದ ಕೆಎಸ್ಸಾರ್ಟಿಸಿ ಮತ್ತು ಖಾಸಗಿ ಬಸ್ಗಳಿಗೆ ಈ ಬಾರಿ ಬೇಡಿಕೆ ತುಂಬಾ ಕಡಿಮೆಯಾಗಿದೆ.
ಕೆಎಸ್ಸಾರ್ಟಿಸಿ ಅಧಿಕಾರಿಗಳು ಹೇಳು ವಂತೆ, “ಕೊರೊನೋತ್ತರದಲ್ಲಿ ಗಣೇಶ ಹಬ್ಬಕ್ಕೆ ಒಂದು ವಾರ ಇರುವಾಗಲೇ ಬಸ್ಗಳಲ್ಲಿ ಹೆಚ್ಚಿನ ಮಂದಿ ಮುಂಗಡ ಬುಕ್ಕಿಂಗ್ ಮಾಡುತ್ತಿದ್ದರು. ಆದರೆ, ಈ ಬಾರಿ ಇನ್ನೂ, ಸೀಟು ಭರ್ತಿಯಾಗುವಷ್ಟು ಬುಕ್ಕಿಂಗ್ ಆಗಿಲ್ಲ. ಪ್ರಯಾಣಿಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಕೆಎಸ್ಸಾರ್ಟಿಸಿ ಈಗಾಗಲೇ ಹೊಸ ಯೋಜನೆ ಘೋಷಿಸಿದೆ. ಅದರಂತೆ, ರಾಜ್ಯ ಮತ್ತು ಅಂತಾರಾಜ್ಯದಲ್ಲಿರುವ 685 ಗಣಕೀಕೃತ ಬುಕ್ಕಿಂಗ್ ಕೌಂಟರ್ ತೆರೆಯಲಾಗಿದೆ. ನಾಲ್ಕು ಅಥವಾ ಹೆಚ್ಚಿನ ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್ ಕಾಯ್ದಿರಿಸಿದರೆ ಶೇ.5ರಷ್ಟು ಮತ್ತು ಹೋಗುವ ಮತ್ತು ಬರುವ ಪ್ರಯಾಣದ ಟಿಕೆಟ್ ಒಟ್ಟಿಗೆ ಕಾಯ್ದಿರಿಸಿದರೆ ಶೇ.10ರಷ್ಟು ರಿಯಾಯಿತಿ ನೀಡಿದೆ’ ಎನ್ನುತ್ತಾರೆ.