ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸೇರಿದ ತೋಟದಲ್ಲಿ ವಾಮಾಚಾರ ನಡೆಸಿರುವ ಶಂಕೆ ವ್ಯಕ್ತವಾಗಿದೆ.
ಮೇ 11 ರಂದು ಶಿಕಾರಿಪುರ ತಾಲೂಕಿನ ಬಂಡಿ ಭೈರನಹಳ್ಳಿ ಮಜರೆ ಸಿದ್ಧನಪುರ ಗ್ರಾಮದ ಸರ್ವೆ ನಂಬರ್ 36 ರಲ್ಲಿರುವ ಯಡಿಯೂರಪ್ಪನವರ ತೋಟದ ಬಳಿ ಪುನುಗು ಬೆಕ್ಕನ್ನು ತಂದು ಹೂತು ಹಾಕಿರುವ ವಿಚಾರ ಈಗ ಅನುಮಾನಕ್ಕೆ ಕಾರಣವಾಗಿದೆ.
ಮೇ 11 ನೇ ತಾರೀಕಿನಂದು ನಡೆದಿರುವ ಘಟನೆಗೆ ಸಂಬಂಧಪಟ್ಟಂತೆ ಯಡಿಯೂರಪ್ಪನವರ ಹಿರಿಯ ಪುತ್ರ ಮತ್ತು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ಬಹಿರಂಗಪಡಿಸಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಅವರಿಗೆ ಸೇರಿದ ಅಡಕೆ ತೋಟದಲ್ಲಿ ವಾಮಾಚಾರ ಶಂಕೆಯೊಂದಿಗೆ ಯಡಿಯೂರಪ್ಪನವರ ಕಿರಿಯ ಪುತ್ರ ಮತ್ತು ಶಿಕಾರಿಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಬಿ. ವೈ. ವಿಜಯೇಂದ್ರರನ್ನು ಚುನಾವಣೆಯಲ್ಲಿ ಸೋಲಿಸುವ ನಿಟ್ಟಿನಲ್ಲಿ ಇಂತಹದ್ದೊಂದು ಕೃತ್ಯವನ್ನ ಎಸಗಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.
ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದೂರಿನ ಪ್ರಕಾರ ಮೇ 11 ರಂದು ರಾತ್ರಿ 10 ಗಂಟೆಯಿಂದ 10.30 ಗಂಟೆಯ ನಡುವೆ ಘಟನೆ ನಡೆದಿದ್ದು, 3-4 ಜನ ದುಷ್ಕರ್ಮಿಗಳು ಪುನುಗು ಬೆಕ್ಕನ್ನು ಕೊಂದು ತೋಟದಲ್ಲಿ ಹೂತು ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.