ಮಂಗಳೂರು: ಕೊರೋನಾದಿಂದ ಮೃತರಾದ ಹಿಂದೂಗಳ ಶವಗಳನ್ನು ಸಂಸ್ಕಾರ ಮಾಡಲು ಮುಸ್ಲಿಂ ಸಮುದಾಯದ ಸ್ವಯಂ ಸೇವಾ ಸಂಘಟನೆಗಳಿಗೆ ನೀಡದಂತೆ ಆಗ್ರಹಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ವಿಶ್ವ ಹಿಂದೂ ಪರಿಷದ್ ನಾಯಕ ಶರಣ್ ಪಂಪ್ ವೆಲ್ ಅವರ ಹೇಳಿಕೆಯನ್ನು ದಕ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ ತೀವ್ರವಾಗಿ ಖಂಡಿಸಿದ್ದಾರೆ.
ಇಂತಹ ಮಾತುಗಳು ಶರಣ್ ಪಂಪ್ವೆಲ್ ಅವರ ಕೀಳು ಮನಸ್ಥಿತಿಯನ್ನು ಎತ್ತಿತೋರಿಸುತ್ತದೆ ಹಾಗೂ ಹಿಂದೂ ಧರ್ಮವನ್ನು ನಾವು ಯಾರಿಗೂ ಗುತ್ತಿಗೆ ನೀಡಿಲ್ಲ ಎನ್ನುವುದನ್ನು ಶರಣ್ ಪಂಪ್ ವೆಲ್ ಅರ್ಥ ಮಾಡಿಕೊಳ್ಳಬೇಕು. ವಿಶ್ವವೇ ಇಂದು ಕೋರೊನಾದಂತ ಮಹಾಮಾರಿಯಿಂದಾಗಿ ತತ್ತರಿಸಿದ್ದು ಜಾತಿ ಧರ್ಮ ಭೇಧವಿಲ್ಲದೆ ಜನರು ಸಾಯುತ್ತಿದ್ದು ಕೆಲವೊಂದು ಸಂಘಟನೆಗಳು ಮಾನವೀಯ ನೆಲೆಯಲ್ಲಿ ಮೃತ ಶರೀರಗಳ ಅಂತ್ಯಸಂಸ್ಕಾರವನ್ನು ಜಾತಿ ಧರ್ಮದ ಕಟ್ಟಳೆಗಳನ್ನು ಮೀರಿ ನಡೆಸುತ್ತಿದ್ದು ಅದನ್ನು ಕೆಟ್ಟ ದೃಷ್ಟಿಯಿಂದ ಕಾಣುತ್ತಿರುವುದು ಖಂಡನೀಯವಾಗಿದೆ ಎಂದು ದ.ಕ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ ಹೇಳಿದರು.
ಪ್ರಸ್ತುತ ಪರಿಸ್ಥಿತಿಯಲ್ಲಿ ಶರಣ್ ಪಂಪ್ವೆಲ್ ಅವರು ಸಮರ ಮಾಡಬೇಕಾಗಿರುವುದು ಇಲ್ಲಿನ ಅವ್ಯವಸ್ಥೆಯ ವಿರುದ್ಧ, ರೋಗಿಗಳಿಗೆ ವೆಂಟಿಲೇಟರ್ ಆಕ್ಸಿಜನ್ ಸಿಗದೇ ಇರುವುದರ ವಿರುದ್ಧ ಹೊರತು ಶವಸಂಸ್ಕಾರದ ವಿರುದ್ದ ಅಲ್ಲ. ಹಿಂದೂ ಧರ್ಮದವರ ಶವಗಳನ್ನು ಮುಸ್ಲಿಂಮರು ಅಂತ್ಯಸಂಸ್ಕಾರ ಮಾಡಬಾರದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆ ನೀಡುವ ಮೂಲಕ ಸಮಾಜದಲ್ಲಿ ಕೋಮು ಘರ್ಷಣೆಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತರು ಕೂಡಲೇ ಕ್ರಮ ಕೈಗೊಂಡು ಸಮಾಜದ ಶಾಂತಿ ಭಂಗಕ್ಕೆ ಅವಕಾಶ ನೀಡದಂತೆ ದಕ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ ಆಗ್ರಹಿಸಿದ್ದಾರೆ.