Thursday, May 2, 2024
Homeಕರಾವಳಿಉಡುಪಿಖಾಸಗಿ ವ್ಯಕ್ತಿಯ ಬಗ್ಗೆ ಪತ್ರಿಕೆಗೆ ಜಾಹೀರಾತು- ನಾಲ್ಕು ಪತ್ರಿಕೆಗಳ ಸಂಪಾದಕರು ಹಾಗೂ ಬ್ಯಾಂಕಿನ ಅಧ್ಯಕ್ಷ, ನಿರ್ದೇಶಕರು...

ಖಾಸಗಿ ವ್ಯಕ್ತಿಯ ಬಗ್ಗೆ ಪತ್ರಿಕೆಗೆ ಜಾಹೀರಾತು- ನಾಲ್ಕು ಪತ್ರಿಕೆಗಳ ಸಂಪಾದಕರು ಹಾಗೂ ಬ್ಯಾಂಕಿನ ಅಧ್ಯಕ್ಷ, ನಿರ್ದೇಶಕರು ಸೇರಿ 23 ಮಂದಿ ಮೇಲೆ ಕ್ರಿಮಿನಲ್ ಕೇಸ್ ದಾಖಲು

spot_img
- Advertisement -
- Advertisement -

ಉಡುಪಿ: ಖಾಸಗಿ ಆಸ್ತಿ ವಿಚಾರದ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕಿನ ವತಿಯಿಂದ ಪತ್ರಿಕೆಗಳಲ್ಲಿ ಎಸ್.ಸಿ.ಡಿ.ಸಿ.ಸಿ ಬ್ಯಾಂಕಿನ ಮಾಜಿ ನಿರ್ದೇಶಕ ಕಿಶನ್ ಹೆಗ್ಡೆ ಕೊಳ್ಳೆಬೈಲ್ ಅವರ ವಿರುದ್ಧ ಜಾಹೀರಾತು ನೀಡಿದ್ದನ್ನು ಪ್ರಶ್ನಿಸಿ ಉಡುಪಿ ಜೆಎಂಎಫ್ ಕೋರ್ಟಿನಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಾಗಿದೆ.

ಜಾಹೀರಾತು ಪ್ರಕಟಿಸಿದ್ದ ನಾಲ್ಕು ಪತ್ರಿಕೆಗಳ ಸಂಪಾದಕರು ಮತ್ತು ಬ್ಯಾಂಕಿನ ಆಡಳಿತ ಮಂಡಳಿಯ ಎಲ್ಲ ನಿರ್ದೇಶಕರು, ಅಧ್ಯಕ್ಷ ಹಾಗೂ ಬ್ಯಾಂಕಿನ ಸಿಇಓ ಸೇರಿ ಒಟ್ಟು 23 ಮಂದಿ ಮೇ 27ರಂದು ಉಡುಪಿ ಸಿವಿಲ್ ಮತ್ತು ಜೆಎಂಎಫ್ ನ್ಯಾಯಾಲಯಕ್ಕೆ ಖುದ್ದು ಹಾಜರಾಗಲು ಸಮನ್ಸ್ ಜಾರಿಯಾಗಿದೆ.

ಕಿಶನ್ ಹೆಗ್ಡೆ ಕೊಳ್ಳೆಬೈಲ್ ಹಾಗೂ ಅವರ ತಮ್ಮನ ನಡುವೆ ಕುಟುಂಬದ ಆಸ್ತಿ ವಿಚಾರದಲ್ಲಿ ಕಲಹ ಇತ್ತು. ಇದೇ ನೆಪದಲ್ಲಿ ಎಸ್.ಸಿ.ಡಿ.ಸಿ.ಸಿ ಬ್ಯಾಂಕಿನ ಅಧ್ಯಕ್ಷ ರಾಜೇಂದ್ರ ಕುಮಾರ್ ಮತ್ತು ಆಡಳಿತ ವರ್ಗ ಕಿಶನ್ ಹೆಗ್ಡೆ ಜೊತೆಗಿನ ಹಳೆ ವೈಷಮ್ಯದಿಂದಾಗಿ ಕುಟುಂಬ ಕಲಹದ ವಿಚಾರವನ್ನು ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಸೇಡು ತೀರಿಸಿತ್ತು.

ಜಾಹೀರಾತು ಪ್ರಕಟಿಸಿದ್ದಕ್ಕಾಗಿ ಉದಯವಾಣಿ, ವಿಜಯಕರ್ನಾಟಕ, ವಿಜಯವಾಣಿ, ಹೊಸದಿಗಂತ ಪತ್ರಿಕೆಗಳ ಸಂಪಾದಕರು ಮತ್ತು ಸಿಇಓಗಳಿಗೆ ಸಮನ್ಸ್ ಜಾರಿ ಮಾಡಲಾಗಿದೆ. ಮೇ 27ರಂದು ಕೋರ್ಟಿಗೆ ಖುದ್ದಾಗಿ ಅಥವಾ ವಕೀಲರ ಮೂಲಕ ಹಾಜರಾಗಿ ಜಾಹೀರಾತಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ನೀಡುವಂತೆ ಸೂಚಿಸಲಾಗಿದೆ.

ಇದರ ನಡುವೆ, ಎಸ್.ಸಿ.ಡಿ.ಸಿ.ಸಿ ಬ್ಯಾಂಕಿನ ಸಿಇಓ ರವೀಂದ್ರ ಅವರಲ್ಲಿ ಜಾಹೀರಾತು ಬಗ್ಗೆ ವಕೀಲರ ನೋಟೀಸ್ ನೀಡಿ ಸ್ಪಷ್ಟನೆ ಕೇಳಲಾಗಿತ್ತು. ಬ್ಯಾಂಕಿನ ಆಡಳಿತ ಮಂಡಳಿ ನಿರ್ಣಯವೆಂದು ಸ್ಪಷ್ಟನೆ ನೀಡಿದ್ದರಿಂದ ಬ್ಯಾಂಕಿನ ಅಧ್ಯಕ್ಷ ರಾಜೇಂದ್ರ ಕುಮಾರ್ ಸೇರಿದಂತೆ 18 ಮಂದಿ ನಿರ್ದೇಶಕರು ಹಾಗೂ ಸಿಇಓ ರವೀಂದ್ರ ಅವರನ್ನು ಆರೋಪಿಯನ್ನಾಗಿಸಿ ಕ್ರಿಮಿನಲ್ ಕೇಸು ಮಾಡಲಾಗಿದೆ.

ಪತ್ರಿಕೆಯ ಸಂಪಾದಕರನ್ನು ಮೊದಲ ನಾಲ್ಕು ಆರೋಪಿಗಳೆಂದು ಹೆಸರಿಸಿದ್ದು 5ನೇ ಆರೋಪಿಯಾಗಿ ಬ್ಯಾಂಕಿನ ಅಧ್ಯಕ್ಷರನ್ನು ಹಾಗೂ ಉಳಿದ ನಿರ್ದೇಶಕರನ್ನು ಆನಂತರದ ಆರೋಪಿಗಳಾಗಿ ತೋರಿಸಲಾಗಿದೆ. ಎಲ್ಲ 23 ಮಂದಿಯ ವಿರುದ್ಧವೂ ಸೆಕ್ಷನ್ 499 ಮತ್ತು 500 ಅಡಿ ಉದ್ದೇಶಪೂರ್ವಕ ತೇಜೋವಧೆ ಎಸಗಿದ್ದಾಗಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ.

- Advertisement -
spot_img

Latest News

error: Content is protected !!