ಬೆಂಗಳೂರು : ಕಾಶ್ಮೀರಿ ಪಂಡಿತರ ಕುರಿತು ಹೇಳಿಕೆ ನೀಡಿ ವಿವಾದಕ್ಕೊಳಗಾದ ನಟಿ ಸಾಯಿಪಲ್ಲವಿ ಪರ ಸ್ಯಾಂಡಲ್ವುಡ್ ನಟಿ ರಮ್ಯಾ ಬ್ಯಾಟ್ ಬೀಸಿದ್ದು, ‘ನಟಿ ಸಾಯಿಪಲ್ಲವಿ ಸತ್ಯ ಹೇಳಿದ್ದಾರೆ’ ಎಂದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ನಟಿ ರಮ್ಯಾ, ‘ನಟಿ ಸಾಯಿಪಲ್ಲವಿ ಸತ್ಯ ಹೇಳಿದ್ದಾರೆ. ತುಳಿತಕ್ಕೊಳಗಾದವರಿಗೆ ರಕ್ಷಣೆ ನೀಡಬೇಕು ಎಂದಿದ್ದಾರೆ. ಮತ್ತೊಂದು ಟ್ವೀಟ್ನಲ್ಲಿ ‘ಒಳ್ಳೆಯ ಮನುಷ್ಯರಾಗಿರಿ’, ‘ನ್ಯಾಯದ ಪರವಾಗಿರಿ’, ‘ಇನ್ನೊಬ್ಬ ಮನುಷ್ಯನನ್ನು ನೋಯಿಸಬೇಡಿ’, ‘ನೀವು ನ್ಯಾಯಯುತವಾಗಿರುವಾಗ ಬಲ ಅಥವಾ ಎಡಪಂಥೀಯರು ಮುಖ್ಯವಲ್ಲ’ ಎಂದು ಸಾಯಿಪಲ್ಲವಿ ಹೇಳಿದರು. ಯಾವುದೇ ವಿವೇಕಿ ಮತ್ತು ಸಭ್ಯ ಮನುಷ್ಯನು ತಿಳಿದುಕೊಳ್ಳಬೇಕಾದ ವಿಷಯವಿದು’ ಎಂದಿದ್ದಾರೆ.
ಅಂದಹಾಗೆ, ನಟಿ ಸಾಯಿಪಲ್ಲವಿ ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ, ‘ಆ ಸಮಯದಲ್ಲಿ ಕಾಶ್ಮೀರಿ ಪಂಡಿತರನ್ನು ಹೇಗೆ ಕೊಲ್ಲಲಾಯಿತು ಎಂದು ಕಾಶ್ಮೀರಿ ಫೈಲ್ಸ್ ಚಲನಚಿತ್ರದಲ್ಲಿ ತೋರಿಸಲಾಗಿದೆ. ಈ ವಿಷಯವನ್ನು ಧಾರ್ಮಿಕ ಸಂಘರ್ಷ ಎಂದು ನೀವು ಪರಿಗಣಿಸುತ್ತಿದ್ದರೆ, ಇತ್ತೀಚೆಗೆ ಗೋವುಗಳನ್ನು ಸಾಗಿಸುತ್ತಿದ್ದ ಮುಸ್ಲಿಂ ಚಾಲಕನನ್ನು ಥಳಿಸಿ ‘ಜೈ ಶ್ರೀ ರಾಮ್’ ಎಂದು ಹೇಳಲು ಒತ್ತಾಯಿಸಿದ ಘಟನೆ ನಡೆದಿದೆ, ಹಾಗಾದರೆ ಎರಡೂ ಘಟನೆಗಳ ನಡುವೆ ಏನು ವ್ಯತ್ಯಾಸ ಇದೆ?’ ಎಂದು ಪ್ರಶ್ನಿಸಿದ್ದರು.