ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ಕೊರೊನಾ ವೈರಸ್ ಆರ್ಭಟ ಜೋರಾಗಿದೆ. ಈ ಬಗ್ಗೆ ಜನರಲ್ಲಿ ಎಷ್ಟೇ ಅರಿವು ಮೂಡಿಸಿದ್ರೂ ಕೂಡ ಸಿಲಿಕಾನ್ ಸಿಟಿಯಲ್ಲಿ ಕೋವಿಡ್ ಆರ್ಭಟ ಕಮ್ಮಿಯಾಗುತ್ತಿಲ್ಲ. ಜನ ಮನೆಯಿಂದ ಹೊರಗೆ ಬರೋದು ಕೂಡ ನಿಂತಿಲ್ಲ. ಜನರ ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕೋದೇ ಬಿಬಿಎಂಪಿಗೆ ದೊಡ್ಡ ತಲೆನೋವಾಗಿದೆ.
ಹೀಗಿರುವಾಗಲೇ ಬಿಬಿಎಂಪಿ ಕೊರೊನಾ ವೈರಸ್ ಕುರಿತಾದ ನಿಖರ ಮಾಹಿತಿಗಳನ್ನು ಒದಗಿಸುವ ನಟ, ನಿರ್ದೇಶಕ ರಮೇಶ್ ಅರವಿಂದ್ ಅವರನ್ನು ತನ್ನ ರಾಯಭಾರಿಯನ್ನಾಗಿ ನೇಮಕ ಮಾಡಿದೆ.
ಕೊರೊನಾ ವೈರಸ್ ಸಂಕಷ್ಟವನ್ನು ನಿಯಂತ್ರಿಸಲು ನೆರವಾಗುವಂತೆ ಅದರ ಕುರಿತು ಜನರಿಗೆ ಅಧಿಕೃತ ಮಾಹಿತಿ ಒದಗಿಸಲು ರಮೇಶ್ ಅರವಿಂದ್ ನೆರವಾಗಲಿದ್ದಾರೆ. ಬಿಬಿಎಂಪಿಗೆ ನೂತನವಾಗಿ ನೇಮಕಗೊಂಡಿರುವ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಈ ಬಗ್ಗೆ ನಟ ರಮೇಶ್ ಅರವಿಂದ್ ಅವರಿಗೆ ಮಾಹಿತಿ ನೀಡಿದ್ದಾರೆ.
ಇಷ್ಟೇ ಅಲ್ಲದೇ, ಕೊರೊನಾ ವೈರಸ್ ಸಂಕಷ್ಟವನ್ನು ನಿಭಾಯಿಸಲು ಸಮಿತಿಯೊಂದನ್ನು ರಚಿಸಲಾಗಿದೆ. ಪರಿಣಾಮಕಾರಿ ಫಲಿತಾಂಶಕ್ಕಾಗಿ ಈ ಸಮಿತಿಗೆ ವಿವಿಧ ವಲಯಗಳ ಜನರನ್ನು ಸೇರಿಸಿಕೊಳ್ಳಲಾಗಿದೆ. ತಮ್ಮ ವೈಯಕ್ತಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಈ ಮಾಹಿತಿಗಳನ್ನು ಜನರಿಗೆ ತಲುಪಿಸುತ್ತಿರುವುದಾಗಿ ರಮೇಶ್ ಅರವಿಂದ್ ತಿಳಿಸಿದ್ದರು. ಈಗ ಸವಾಲು ಇನ್ನಷ್ಟು ದೊಡ್ಡದಾಗಿರುವುದರಿಂದ ರಾಜ್ಯ ಸರ್ಕಾರ ಅವರಿಗೆ ಈ ಜವಾಬ್ದಾರಿ ನೀಡಿದೆ ಎಂದು ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಜನರಲ್ಲಿ ವಿವಿಧ ಜಾಗೃತಿ ಮೂಡಿಸಲು ಹಾಗೂ ಅವರಿಗೆ ಮಾಹಿತಿ ಒದಗಿಸುವ ಕಾರ್ಯವನ್ನು ಬಿಬಿಎಂಪಿಯ ರಾಯಭಾರಿಯಾಗಿ ರಮೇಶ್ ಅರವಿಂದ್ ನಿಭಾಯಿಸಲಿದ್ದಾರೆ. ಕೋವಿಡ್ 19 ನಿಭಾಯಿಸುವ ಸಲುವಾಗಿ ರಚಿಸಲಾಗಿರುವ ಬಿಬಿಎಂಪಿ ಕೋವಿಡ್ 19 ಟಾಸ್ಕ್ ಫೋರ್ಸ್ನಲ್ಲಿಯೂ ರಮೇಶ್ ಅರವಿಂದ್ ಭಾಗಿಯಾಗಿದ್ದಾರೆ.


