ಮಂಗಳೂರು; ನ್ಯಾಯಾಲಯದಿಂದ ಬಂಧನದ ವಾರಂಟ್ ಹಿನ್ನೆಲೆ ಆರೋಪಿಯೋರ್ವನನ್ನು ಬಂಧಿಸಲು ತೆರಳಿದ್ದ ವೇಳೆ ಪೊಲೀಸರಿಗೆ ಹಲ್ಲೆ ನಡೆಸಿರುವ ಆರೋಪಿ ಮತ್ತು ಆತನ ಪತ್ನಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬಜ್ಪೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಅದ್ಯಪಾಡಿ ನಿವಾಸಿ ಮನ್ಸೂರ್ (41) ಮತ್ತು ಆತನ ಪತ್ನಿ ಅಸ್ಮಾ ಬಂಧಿತರು.
ಆರೋಪಿ ಮನ್ಸೂರ್ ವಿರುದ್ಧ ಬಂಧನದ ವಾರೆಂಟ್ ಹಿನ್ನೆಲೆ ಮೂಡಬಿದ್ರೆ ಠಾಣೆ ಪಿಎಸ್ಸೈ ಸುದೀಪ್ ಮತ್ತು ಸಿಬ್ಬಂದಿ ಹಾಗೂ ಬಜ್ಪೆ ಠಾಣಾ ಪೊಲೀಸರು ದಸ್ತಗಿರಿ ಮಾಡಲು ಮನ್ಸೂರ್ ನ ಮನೆಗೆ ತೆರಳಿದ್ದರು.ಈ ವೇಳೆ ಆರೋಪಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಲ್ಲದೆ ಆತನ ಹೆಂಡತಿ ಮತ್ತು ಮನೆಯ ಇತರ ಸದಸ್ಯರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಪೊಲೀಸರಿಗೆ ಕೈಯಿಂದ ತರಚಿ ಗಾಯ ಮಾಡಿದ್ದರು ಎನ್ನಲಾಗಿದೆ. ಹೀಗಾಗಿ ಆರೋಪಿಯ ಜತೆ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಲ್ಲಿ ಆತನ ಪತ್ನಿ ಅಸ್ಮಾಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಮನ್ಸೂರ್ ವಿರುದ್ಧ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳ ಪೊಲೀಸ್ ಠಾಣೆಗಳಲ್ಲಿ ಅನೇಕ ಪ್ರಕರಣಗಳು ದಾಖಲಾಗಿವೆ. ಬಜ್ಪೆ ಠಾಣೆಯಲ್ಲಿ -6, ಮಡಿಕೇರಿ ಠಾಣೆಯಲ್ಲಿ -1, ತಿಪಟೂರು ಹುಳಿಯಾಲ ಠಾಣೆಯಲ್ಲಿ-1, ಕುಶಾಲನಗರ ಠಾಣೆಯಲ್ಲಿ-3, ಸಕಲೇಶಪುರ ಅರೆಹಳ್ಳಿ ಠಾಣೆಯಲ್ಲಿ-1, ಅಜೆಕಾರು ಠಾಣೆಯಲ್ಲಿ-1, ಕಾರ್ಕಳ ಠಾಣೆಯಲ್ಲಿ-1,ಸೋಮವಾರ ಪೇಟೆ ಠಾಣೆಯಲ್ಲಿ-3, ಕಾವೂರು ಠಾಣೆಯಲ್ಲಿ-1, ಸುರತ್ಕಲ್ ಠಾಣೆಯಲ್ಲಿ -2, ಮೂಡಬಿದ್ರೆ ಠಾಣೆಯಲ್ಲಿ-4 ಒಟ್ಟು 24 ಕ್ಕಿಂತಲು ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಪೊಲೀಸ್ ಆಯುಕ್ತರಾದ ಶಶಿ ಕುಮಾರ್ ಅವರ ಮಾರ್ಗದರ್ಶನದಂತೆ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅಂಶು ಕುಮಾರ್, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್, ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಮಹೇಶ್ ಕುಮಾರ್ ಅವರ ನಿರ್ದೇಶನದಂತೆ, ಕಾರ್ಯಚರಣೆಯಲ್ಲಿ ಬಜ್ಪೆ ಠಾಣಾ ಪೊಲೀಸ್ ನಿರೀಕ್ಷ ಪಕಾಶ್ ಮತ್ತು ಮೂಡಬಿದ್ರೆ ಠಾಣಾ ಪಿಎಸ್ಸೈ ಸುದೀಪ್ ನೇತೃತ್ವದ ಸಿಬ್ಬಂದಿ ಪಾಲ್ಗೊಂಡಿದ್ದರು.