ಮೈಸೂರು; ಇನ್ನೋವಾ ಕಾರು ಮತ್ತು ಖಾಸಗಿ ಬಸ್ ಮಧ್ಯೆ ಅಪಘಾತ ಸಂಭವಿಸಿ ಒಂದೇ ಕುಟುಂಬದ 10 ಮಂದಿ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಸುಜಾತ, ಸಂದೀಪ್, ಮಂಜುನಾಥ್, ಪೂರ್ಣಿಮಾ, ಗಾಯತ್ರಿ, ಆದಿತ್ಯಾ, ಬಸವ, ಕೊಟ್ರೇಶ್ (45), ಪವನ್ (10), ಕಾರ್ತಿಕ್ (08) ಮೃತ ದುರ್ದೈವಿಗಳು.
ಮೈಸೂರಿನ ಕೆ. ಆರ್. ಆಸ್ಪತ್ರೆಗೆ ಭೇಟಿ ನೀಡಿದ ಬಳ್ಳಾರಿ ಶಾಸಕ, ಸಚಿವ ನಾಗೇಂದ್ರ ಸಾವಿಗೀಡಾದವರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದು, ಮೃತಪಟ್ಟ ಎಲ್ಲರೂ ಒಂದೇ ಕುಟುಂಬದವರು ಎಂಬುದನ್ನು ತಿಳಿಸಿದ್ದಾರೆ. ಮೃತ ಹತ್ತು ಮಂದಿ ಒಂದೇ ಕುಟುಂಬದವರು. ಲಿಂಗಾಯತ ಸಮುದಾಯದ ಇವರ ವೃತ್ತಿ ಖಾನಾವಳಿಗಳಿಗೆ ರೊಟ್ಟಿ ಮಾಡಿಕೊಡುವುದು. ಮನೆಯವರೆಲ್ಲ ಸೇರಿ ರೊಟ್ಟಿ ಮಾರಿ ಜೀವನ ನಡೆಸುತ್ತಿದ್ದರು ಎನ್ನಲಾಗಿದೆ.
ಅಪಘಾತದಲ್ಲಿ ಬದುಕುಳಿದವರ ಪರಿಸ್ಥಿತಿಯೂ ಗಂಭೀರವಾಗಿದೆ.ಒಂದು ಮಗುವಿನ ಸ್ಥಿತಿ ಮನಕಲುಕುತ್ತಿದೆ. ಗಾಯಗೊಂಡಿರುವ ಮಗು ತಂದೆಯನ್ನು ಕೇಳುತ್ತಿತ್ತು. ಸಚಿವ ಎಚ್.ಸಿ. ಮಹದೇವಪ್ಪ ಕೂಡ ಆಸ್ಪತ್ರೆಗೆ ಭೇಟಿ ನೀಡಿದ್ದು, ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದಾರೆ. ಈ ಘಟನೆ ಬಗ್ಗೆ ಸಿಎಂ ಸಂತಾಪ ಸೂಚಿಸಿ ಮೃತರಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಮೂವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.