ಬೆಳ್ತಂಗಡಿ : ಭೀಕರ ರಸ್ತೆ ಅಪಘಾತ ನಡೆದಿದ್ದು ಇದರಲ್ಲಿ ಓರ್ವ ಸಾವನ್ನಪ್ಪಿದ್ದು ,ಏಳು ಜನರು ಗಂಭೀರ ಗಾಯಗೊಂಡ ಘಟನೆ ನಿಡ್ಲೆ ಗ್ರಾಮದ ಕುದ್ರಾಯ ಎಂಬಲ್ಲಿ ಇಂದು ಸಂಜೆ ನಡೆದಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸುತ್ತಿದ್ದ ಮಂಡ್ಯ ಜಿಲ್ಲೆಯ ಹತ್ತು ಮಂದಿಯ ಕುಟುಂಬ ಧರ್ಮಸ್ಥಳ ಗ್ರಾಮದ ಕುದ್ರಾಯ ಎಂಬಲ್ಲಿ ಬೊಲೇರೋ ವಾಹನವನ್ನು ರಸ್ತೆಯ ಬಲಕ್ಕೆ ಪಾರ್ಕ್ ಮಾಡಿ ನಿಲ್ಲಿಸಿ ಇಳಿದು ಅಂಗಡಿ ಹೋಗುತ್ತಿದ್ದರು. ಈ ವೇಳೆ ಧರ್ಮಸ್ಥಳ ಡಿಪೋದಿಂದ ಮೈಸೂರಿಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಿಂತಿದ್ದವರಿಗೆ ಹಾಗೂ ಬೊಲೋರೊ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಮಂಡ್ಯ ಜಿಲ್ಲೆಯ ಚೆನ್ನಸಾಂದ್ರ ನಿವಾಸಿಯಾದ ಮಹಾದೇವ(63) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆಯಲ್ಲಿ ಐದು ಜನ ಮಹಿಳೆಯರು , ಓರ್ವ ಗಂಡಸು ,ಒಂದು ಮಗು ಸೇರಿ ಏಳು ಮಂದಿಗೆ ಗಂಭೀರ ಗಾಯವಾಗಿದ್ದು ಇವರನ್ನು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.