ಹುಣಸೂರು: ಕೊರೋನ ಮಧ್ಯೆ ವಿಶ್ವವಿಖ್ಯಾತ ದಸರಾ ಮಹೋತ್ಸವದ ಜಂಬೂ ಸವಾರಿಗೆ ಸಿದ್ಧತೆ ನಡೆದಿದೆ. ಪ್ರಪ್ರಥಮ ಬಾರಿ ಅಂಬಾರಿ ಹೊರಲು ಸಜ್ಜಾಗಿರುವ ಅಭಿಮನ್ಯು ಅದಾಗಲೇ ನಾಗರಹೊಳೆ ಉದ್ಯಾನದ ಮತ್ತಿಗೋಡು ಆನೆ ಶಿಬಿರದಲ್ಲಿ ವಿಶೇಷ ಆರೈಕೆ ಪಡೆದು ವೀರನಹೊಸಹಳ್ಳಿ ಹೆಬ್ಟಾಗಿಲಿಗೆ ಬಂದಿಳಿದಿದ್ದಾನೆ.
ಪ್ರತಿ ದಸರಾದಲ್ಲಿ ನೌಪತ್ ಹಾಗೂ ಗಾಡಿ ಆನೆಯಾಗಿದ್ದ 54 ವರ್ಷದ ಅಭಿಮನ್ಯುವನ್ನು ವಯಸ್ಸಿನ ಕಾರಣಕ್ಕಾಗಿ ಬಳ್ಳೆ ಆನೆ ಶಿಬಿರದ ಅರ್ಜುನನ ಬದಲಿಗೆ ಆಯ್ಕೆ ಮಾಡಲಾಗಿದೆ. ಈ ಮೂಲಕ ಅಂಬಾರಿ ಹೊರುವ ಜವಾಬ್ದಾರಿ ಅಭಿಮನ್ಯು ಹೆಗಲೇರಿದ್ದು, ಕೋವಿಡ್-19 ಭೀತಿಯಿಂದಾಗಿ ನಿತ್ಯ ಶಿಬಿರದಲ್ಲೇ ಅಂಬಾರಿ ಹೊರುವ ತಾಲೀಮು ನಡೆಸಿದ್ದಾನೆ.
ಮಾವುತ ವಸಂತ, ಕವಾಡಿ ರಾಜು ಅವರ ಪಾಲನೆ ಯಲ್ಲಿ ತಾಲೀಮು ನಡೆಸುತ್ತಿರುವ ಅಭಿಮನ್ಯುವಿಗೆ ಶಿಬಿರದ ಸನಿಹವೇ ಇರುವ ಕಂಠಾಪುರ ಕೆರೆಯಲ್ಲಿ ನಿತ್ಯ ಬೆಳಗ್ಗೆ-ಸಂಜೆ ಸ್ನಾನ ಮಾಡಿಸಲಾಗುತ್ತಿದೆ. ಪ್ರತಿದಿನ ಎಣ್ಣೆ ಮಜ್ಜನ ನಡೆಸಲಾಗುತ್ತಿದ್ದು ಹಣೆಗೆ ಹರಳೆಣ್ಣೆ ಮತ್ತು ಕಾಲುಗಳಿಗೆ ಬೇವಿನ ಎಣ್ಣೆ ಹಚ್ಚಿ ಅಭ್ಯಂಜನ ನಡೆಸಿ ಅಣಿಗೊಳಿಸಲಾಗುತ್ತಿದೆ.
ಆಹಾರವಾಗಿ ಕುಸಲಕ್ಕಿ, ಹುರುಳಿಕಾಳು, ಹೆಸರುಕಾಳು, ಉದ್ದು, ರಾಗಿ ಹುಡಿ ಮತ್ತಿತರ ಕಾಳುಗಳನ್ನು ಬೇಯಿಸಿ ಮುದ್ದೆಮಾಡಿ ನೀಡುವುದಲ್ಲದೇ ಬೆಲ್ಲ ಮತ್ತು ತೆಂಗಿನಕಾಯಿಯನ್ನು ಪ್ರತ್ಯೇಕವಾಗಿ ನೀಡುವ ಮೂಲಕ ಅಭಿಮನ್ಯುವನ್ನು ಅಣಿಗೊಳಿಸಲಾಗುತ್ತಿದೆ. ಪಶುವೈದ್ಯ ಡಾ.ಮುಜೀಬ್ ರೆಹಮಾನ್ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಆರ್ಎಫ್ಒ ಕಿರಣ್ಕುಮಾರ್ ಕಣ್ಗಾವಲಿನಲ್ಲಿ ಅಭಿಮನ್ಯು ಆರೈಕೆ ನಡೆಸಲಾಗುತ್ತಿದೆ.