ಸುಳ್ಯ: ಅರಂತೋಡಿನ ಆಲೆಟ್ಟಿ ಗ್ರಾಮದ ಕುಡೆಕಲ್ಲು ಎಂಬಲ್ಲಿ ವಿದ್ಯುತ್ ಲೈನಿಗೆ ಮರದ ಕೊಂಬೆ ತಾಗಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಕಾಡಿಗೆ ಬೆಂಕಿ ತಗುಲಿದ ಘಟನೆ ನಿನ್ನೆ ಸಂಭವಿಸಿದೆ.
ಆಲೆಟ್ಟಿಯ ಮುಖ್ಯ ರಸ್ತೆಯಿಂದ ಕುಡೆಕಲ್ಲು ಕುಂಚಡ್ಕ ಕಡೆಗೆ ಸಂಚರಿಸುವ ಮಧ್ಯೆ ಕುಡೆಕಲ್ಲಿನ ಎತ್ತರದ ಪ್ರದೇಶದಲ್ಲಿ ವಿದ್ಯುತ್ ಲೈನಿಗೆ ಮರದ ಕೊಂಬೆ ತಗುಲಿದ ವೇಳೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಉಂಟಾಗಿ ತಳಭಾಗದಲ್ಲಿ ಸುಮಾರು ಒಂದು ಎಕ್ರೆ ಪ್ರದೇಶದಲ್ಲಿ ಬೆಂಕಿ ಆವರಿಸಿ ಹೊತ್ತಿಕೊಂಡಿದೆ.
ಇನ್ನು ಸ್ಥಳೀಯ ಪಂಚಾಯತ್ ಸದಸ್ಯರಾದ ಚಂದ್ರಕಾಂತ ನಾರ್ಕೋಡು ಮತ್ತು ಸತ್ಯಪ್ರಸಾದ್ ಗಬ್ಬಲ್ಕಜೆ ಯವರು ವಿಷಯ ತಿಳಿದು ಸ್ಥಳಕ್ಕಾಗಮಿಸಿ ಅಗ್ನಿಶಾಮಕ ದಳದವರಿಗೆ ಕರೆ ಮಾಡಿ ವಿಷಯ ತಿಳಿಸಿದರು.
ಸ್ಥಳಕ್ಕಾಗಮಿಸಿದ ಸುಳ್ಯ ಅಗ್ನಿಶಾಮಕ ದಳದವರು ಹಾಗೂ ಸ್ಥಳೀಯರು ಸೇರಿ ನೀರು ಹಾಯಿಸಿ ಬೆಂಕಿ ನಂದಿಸುವಲ್ಲಿ ಪ್ರಯತ್ನಿಸಿದರು. ಪರಿಸರದ ಸ್ಥಳೀಯರ ಎಚ್ಚರಿಕೆಯಿಂದಾಗಿ ದೊಡ್ಡ ಮಟ್ಟದ ಅನಾಹುತ ತಪ್ಪಿದಂತಾಗಿದೆ.


