ಸುಳ್ಯ; ರಾಯಚೂರಿಗೆ ಸಹೋದ್ಯೋಗಿ ಮದುವೆಗೆ ಹೋಗುತ್ತಿದ್ದ ಕಾರು ಮರಕ್ಕೆ ಡಿಕ್ಕಿಯಾಗಿ ಸುಳ್ಯದ ಯುವತಿ ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಆದೋನಿ-ಸಿರುಗುಪ್ಪ ಮುಖ್ಯ ರಸ್ತೆಯಲ್ಲಿ ನಡೆದಿದೆ. ಕ್ಷಿಪ್ರಾ (25) ಮೃತ ಯುವತಿ.

ಕ್ಷಿಪ್ರಾ ಸೇರಿದಂತೆ ಬೆಂಗಳೂರಿನ ‘ಆಟೋಲೀವ್ ಇಂಡಿಯಾ’ ಕಂಪನಿಯ ನಾಲ್ವರು ಉದ್ಯೋಗಿಗಳು ರಾಯಚೂರಿನ ಲಿಂಗಸುಗೂರಿನಲ್ಲಿ ನಡೆಯಲಿರುವ ಸಹೋದ್ಯೋಗಿ ನಂದಿನಿ ಅವರ ಮದುವೆಗೆಂದು ಶುಕ್ರವಾರ ರಾತ್ರಿ 11 ಗಂಟೆಗೆ ಹೊರಟಿದ್ದರು. ದಾರಿಯಲ್ಲಿ ಮಂತ್ರಾಲಯದ ರಾಘವೇಂದ್ರ ಸ್ವಾಮಿ ದರ್ಶನ ಪಡೆಯಲು ಮಾರ್ಗ ಬದಲಿಸಿದ್ದರು. ಶನಿವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ಚಾಲನೆ ಮಾಡುತ್ತಿದ್ದ ಪ್ರದೀಪ್ ಅವರಿಗೆ ನಿದ್ರೆಯ ಮಂಪರು ಆವರಿಸಿದ್ದರಿಂದ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಮುಂಭಾಗದ ಸೀಟಿನಲ್ಲಿದ್ದ ಕ್ಷಿಪ್ರಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಪ್ರದೀಪ್ ಅವರ ಸ್ಥಿತಿ ಗಂಭೀರವಾಗಿದ್ದು, ಕೋಮಾ ಸ್ಥಿತಿಗೆ ತಲುಪಿದ್ದಾರೆ. ಉಳಿದಂತೆ ಅರ್ಪಿತಾ ಮತ್ತು ಶರ್ಮಿಳಾ ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ. ಆದೋನಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


