ಉಳ್ಳಾಲ: ರಿಕ್ಷಾ ಚಾಲಕನೋರ್ವ ಸಹೋದ್ಯೋಗಿಯ ಮೇಲೆ ಹಲ್ಲೆಗೈದು ಹಲ್ಲುಗಳನ್ನು ಉದುರಿಸಿ ಪರಾರಿಯಾಗಿದ್ದ ಘಟನೆ ಮಂಗಳೂರು ಹೊರವಲಯದ ಉಳ್ಳಾಲ ಸಮೀಪದ ಕುಂಪಲದಲ್ಲಿ ನಡೆದಿದ್ದು, ಆರೋಪಿ ರಿಕ್ಷಾ ಚಾಲಕನನ್ನು ಘಟನೆ ನಡೆದ 24ಗಂಟೆಯೊಳಗೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರೋಕೇಶ್(37) ಯಾನೆ ಸೈಕೋ ರೋಸ್ ಆರೋಪಿ. ಸುಶಾಂತ್(31) ಎಂಬವರು ಹಲ್ಲೆಗೆ ಒಳಗಾದವರು.
ಕೂಡ ಕುಂಪಲದ ಬೈಪಾಸ್ ಆಟೋ ರಿಕ್ಷಾ ಪಾರ್ಕಿನಲ್ಲಿ ಇವರಿಬ್ಬರೂ ರಿಕ್ಷಾ ಚಾಲಕರಾಗಿ ಕೆಲಸವನ್ನು ಮಾಡುತ್ತಿದ್ದರು.
ಆರೋಪಿ ರೋಕೇಶ್ ಯಾನೆ ಸೈಕೋ ರೋಸ್ ಸಹೋದ್ಯೋಗಿ ಸುಶಾಂತ್ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ನಂತರದಲ್ಲಿ ಕೈಯಿಂದ ಮುಖಕ್ಕೆ ಬಲವಾಗಿ ಥಳಿಸಿದ್ದು ಎರಡು ಹಲ್ಲುಗಳು ಉದುರಿ ಹೋಗಿದೆ.
ಇನ್ನು ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸುಶಾಂತ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಬಳಿಕ ಅವರು ಸಹೋದ್ಯೋಗಿ ರೋಕೇಶ್ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಯ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿಯು ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.
ಕುಂಪಲ ನಿವಾಸಿಯಾಗಿರುವ ರೋಕೇಶ್ ಯಾನೆ ಸೈಕೊ ರೋಸ್ ಮಾದಕ ವ್ಯಸನಿಯಾಗಿದ್ದ ಎನ್ನುವ ವಿಚಾರಗಳ ಜೊತೆಗೆ ಈತನ ವಿರುದ್ಧ ಹಲವು ಆರೋಪಗಳು ಕೂಡ ಕೇಳಿ ಬಂದಿವೆ. ಇನ್ನು ಆರೋಪಿಯ ಸಹೋದರ ವೃತ್ತಿಪರ ವಕೀಲನಾಗಿದ್ದು ಆತನ ಧೈರ್ಯದಿಂದಲೇ ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದ ಅಂತ ಹೇಳಲಾಗುತ್ತಿದೆ.
ಘಟನೆಯ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.


