ಹುಬ್ಬಳ್ಳಿ: ಫೇಸ್ಬುಕ್ನಲ್ಲಿ ಮಸೀದಿಯ ಚಿತ್ರದ ಮೇಲೆ ಭಗವಾಧ್ವಜ ಹಾರಿಸಿದ ಚಿತ್ರ ಎಡಿಟ್ ಮಾಡಿ ಯುವಕನೊಬ್ಬ ಸ್ಟೇಟಸ್ ಹಾಕಿಕೊಂಡಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಹಳೇ ಹುಬ್ಬಳ್ಳಿಯಲ್ಲಿ ಶನಿವಾರ ತಡರಾತ್ರಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ ಉದ್ರಿಕ್ತರ ಗುಂಪು, ಬಸ್ಸು ಹಾಗೂ ಮತ್ತಿತರ ವಾಹನಗಳಿಗೆ ಕಲ್ಲು ತೂರಾಟ ನಡೆಸಿದೆ. ಘಟನೆಯಲ್ಲಿ ಇನ್ಸ್ಪೆಕ್ಟರ್ ಸೇರಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಭಾರೀ ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ, ಅಶ್ರುವಾಯು ಪ್ರಯೋಗ ಮಾಡಿದ್ದಾರೆ. ನಗರದಲ್ಲಿ 144 ಸೆಕ್ಷನ್ ಜಾರಿಯಾಗಿದ್ದು, ದ್ವೇಷಮಯ ವಾತಾವರಣ ಉಂಟಾಗಿದೆ.
ರಾಜ್ಯದಲ್ಲಿ ಕಳೆದ ಮೂರು ತಿಂಗಳಿಂದ ಕೋಮು ದ್ವೇಷದ ಗಲಾಟೆ ನಡೆಯುತ್ತಿದ್ದರೂ ಶಾಂತವಾಗಿದ್ದ ಹುಬ್ಬಳ್ಳಿ ಶನಿವಾರ ರಾತ್ರಿ ಇದೇ ಕಾರಣಕ್ಕೆ ಪ್ರಕ್ಷುಬ್ಧವಾಗಿದೆ. ತಡರಾತ್ರಿ 1ಗಂಟೆವರೆಗೂ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯ ಹಿಂಬಾಗದ ಪ್ರದೇಶದಲ್ಲಿ ಕಿಡಿಗೇಡಿಗಳು ಕಲ್ಲುತೂರಾಟ ಪ್ರತಿಭಟನೆ ಮುಂದುವರಿಸಿದ್ದರು. ಒಂದು ಹಂತಕ್ಕೆ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದರೂ ನಗರ ಬೂದಿ ಮುಚ್ಚಿದ ಕೆಂಡವಾಗಿದೆ.
ಕಲ್ಲು ತೂರಾಟದಲ್ಲಿ ಮೂರು ಪೊಲೀಸ್ ಜೀಪು, 10 ಸ್ಕೂಟರ್, ಬಸ್ಸು ಕಾರು ಸೇರಿ ಹಲವು ವಾಹನಗಳು ಜಖಂಗೊಂಡವು. ಪೊಲೀಸ್ ಠಾಣೆ, ಸನಿಹದ ಹಿಂದೂ ದೇಗುಲದ ಮೇಲೆಯೂ ಕಲ್ಲು ಎಸೆಯಲಾಗಿದೆ.
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಗುಂಪು ಚದುರಿಸಲು ಮುಂದಾದರು. ಪರಿಸ್ಥಿತಿ ನಿಯಂತ್ರಣಕ್ಕಾಗಿ ಲಾಠಿ ಪ್ರಹಾರ ನಡೆಸಿದರು. ಅದಕ್ಕೂ ಬಗ್ಗದಿದ್ದಾಗ ಅಶ್ರುವಾಯು ಸಿಡಿಸಿದರು. ಆಗ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ಎದುರಿದ್ದ ಒಂದಿಷ್ಟುಉದ್ರಿಕ್ತರು ಹಿಂಬಾಗಕ್ಕೆ ಓಡಿಹೋಗಿದ್ದಾರೆ. ಕಾರವಾರ ರಸ್ತೆಯನ್ನು ಬಂದ್ ಮಾಡಿ ಸಂಚಾರ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಯಿತು. ಮುಂದುವರಿದು ಇಡಿ ನಗರಾದ್ಯಂತ ಪೊಲೀಸ್ ವಾಹನದ ಮೂಲಕ ಗಸ್ತು ತಿರುಗಿ 144 ಸೆಕ್ಷನ್ ಜಾರಿಯಾಗಿದ್ದು ಯಾವುದೇ ಕಾರಣಕ್ಕೂ ಅನಗತ್ಯ ಓಡಾಟ ಮಾಡದಂತೆ, ಒಬ್ಬರೇ ತಿರುಗಾಡದಂತೆ ಎಚ್ಚರಿಕೆ ನೀಡಿದರು.
ಪೊಲೀಸ್ ಆಯುಕ್ತ ಲಾಭುರಾಮ, ಡಿಸಿಪಿ ಸಾಹಿಲ್ ಬಾಗ್ಲಾ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಹೆಚ್ಚಿನ ಪೊಲೀಸ್ ಪಡೆಯೊಂದಿಗೆ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ಮುಸಲ್ಮಾನ ಮುಖಂಡರನ್ನು ಕರೆದು ಸಮಾಧಾನ ಪಡಿಸಲು ಯತ್ನಿಸುತ್ತಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದ್ದು ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.