ತೆಕ್ಕಟ್ಟೆ : ಇಲ್ಲಿನ ಹೊಂಬಾಡಿ ಮಂಡಾಡಿ ಗ್ರಾ.ಪಂ. ವ್ಯಾಪ್ತಿಯ ರಾಜ್ಯ ಹೆದ್ದಾರಿ ಹುಣ್ನೆಮಕ್ಕಿ ಪೆಟ್ರೋಲ್ ಬಂಕ್ ಸಮೀಪ ಶಾಲಾ ವಾಹನಕ್ಕೆ ಕಾರು ಢಿಕ್ಕಿಯಾಗಿ ಜಖಂಗೊಂಡ ಘಟನೆ ಜೂ. 28ರಂದು ಸಂಜೆ 5.10ರ ಸುಮಾರಿಗೆ ಸಂಭವಿಸಿದೆ.
ಕುಂದಾಪುರದ ಎಚ್ಎಂಎಂ ಆಂಗ್ಲ ಮಾಧ್ಯಮ ಶಾಲೆಯ ಶಾಲಾ ವಾಹನವನ್ನು ಚಾಲಕ ಏಕಾಏಕಿ ಬೇಳೂರು ಒಳ ಮಾರ್ಗದೆಡೆಗೆ ತಿರುಗಿಸಿದ ಪರಿಣಾಮ ಹಾಲಾಡಿಯಿಂದ ಕುಂದಾಪುರದ ಕಡೆಗೆ ಸಾಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ನೇರವಾಗಿ ಬಂದು ಢಿಕ್ಕಿ ಹೊಡೆದಿದೆ ಎಂದು ಹೇಳಲಾಗಿದೆ.
ಪರಿಣಾಮ ಕಾರಿನ ಮುಂಭಾಗ ಜಖಂಗೊಂಡಿದ್ದು, ಅಪಘಾತದ ತೀವ್ರತೆಗೆ ಕಾರಿನ ಏರ್ ಬ್ಯಾಗ್ ತೆರೆದಿದೆ. ಕಾರಿನಲ್ಲಿ ಮಂಡ್ಯ ಮೂಲದ ನಾಲ್ವರು ಪ್ರಯಾಣಿಸುತ್ತಿದ್ದು, ಓರ್ವನಿಗೆ ಗಂಭೀರ ಗಾಯಗಳಾವೆ. ಇನ್ನುಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ತತ್ಕ್ಷಣವೇ ಸ್ಥಳೀಯರ ಸಹಕಾರದಿಂದ ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋಟ ಪೊಲೀಸ್ ಠಾಣೆಯ ಸಿಬಂದಿ ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿದ್ದಾರೆ.