ಚಿಕ್ಕಮಗಳೂರು: ತಾಲ್ಲೂಕಿನ ಅಲ್ಲಂಪುರ ಗ್ರಾಮದಲ್ಲಿ ಎರಡು ದಿನದ ಮಗುವೊಂದನ್ನು ಹೆತ್ತ ತಾಯಿಯೇ ಕಾಫಿ ತೋಟದಲ್ಲಿ ಬಿಟ್ಟು ಹೋಗಿರುವ ಹೃದಯ ವಿದ್ರಾಹಕ ಘಟನೆ ನಡೆದಿದೆ.
ಗುರುವಾರ ಬೆಳಗ್ಗಿನ ಜಾವ 6 ಗಂಟೆಯ ಸಮಯದಲ್ಲಿ ಚಂದ್ರಮ್ಮ ಎಂಬುವರ ಮನೆಯ ಪಕ್ಕದಲ್ಲಿರುವ ಕಾಫಿ ತೋಟದಲ್ಲಿ ಮಗು ಅಳುವ ಸದ್ದು ಕೇಳಿಸಿದೆ. ಮಗುವಿನ ಅಳು ಗಂಟೆಗಳು ಕಳೆದರು ಕೂಡ ನಿಲ್ಲದೇ ಇದಿದ್ದರಿಂದ ಚಂದ್ರಮ್ಮ ತನ್ನ ಮಗಳೊಂದಿಗೆ ತೋಟಕ್ಕೆ ಹೋಗಿದ್ದು, ಅಲ್ಲಿ ಮೈ ಮೇಲೆ ಬಟ್ಟೆಯೇ ಇಲ್ಲದೆ ತೋಟದ ಒಂದು ಮೂಲೆಯಲ್ಲಿ ಅಳುತ್ತಿರುವ ಮಗು ಕಂಡು ಬಂದಿದೆ.
ಹುಟ್ಟಿದ ಎರಡೇ ದಿನಕ್ಕೆ ಪುಟ್ಟ ಕಂದಮ್ಮನನ್ನು ಹೆತ್ತ ತಾಯಿಯೇ ಬಿಟ್ಟು ಹೋಗಿರುವುದು ಗೊತ್ತಾಗಿದ್ದು, ನಂತರದಲ್ಲಿ ಚಂದ್ರಮ್ಮ ಮಗುವನ್ನು ಕರೆತಂದು ತಮ್ಮ ಮನೆಯಲ್ಲಿ ಹಾಲು ಕುಡಿಸಿ ಆರೈಕೆ ಮಾಡಿದ್ದಾರೆ. ತದನಂತರ ಗ್ರಾಮದ ಆಯಾಗೆ ವಿಷಯ ತಿಳಿಸಿ ಸ್ಥಳಕ್ಕೆ ಡಾಕ್ಟರನ್ನು ಕರೆಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ.
ಸ್ಥಳಕ್ಕೆ ಬಂದ ಅಧಿಕಾರಿಗಳು ಮಗುವನ್ನು ತಮ್ಮ ಜೊತೆ ಕರೆದುಕೊಂಡು ಹೋಗಿದ್ದಾರೆ.