ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಳ್ಳಂಬೆಳಿಗ್ಗೆ ಭೀಕರ ಅಪಘಾತ ಸಂಭವಿಸಿದ್ದು, ಐಷಾರಾಮಿ ಆಡಿ ಕ್ಯೂ 3 ಕಾರು ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಹಿಳೆಯರು ಸೇರಿದಂತೆ ಒಟ್ಟು 7 ಮಂದಿ ಸಾವಿಗೀಡಾಗಿದ್ದಾರೆಂದು ತಿಳಿದುಬಂದಿದೆ.
ಮಧ್ಯರಾತ್ರಿ 1-30 ರ ಸುಮಾರಿಗೆ ಕೋರಮಂಗಲದ ಮಂಗಳ ಕಲ್ಯಾಣ ಮಂದಿರದ ಬಳಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದ್ದು, ಚಾಲಕನ ನಿಯಂತ್ರಣ ತಪ್ಪಿ ಫುಟ್ ಮೇಲೇರಿದ ಕಾರು ಬಳಿಕ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಮೃತರನ್ನು ಹೊಸೂರು ಮೂಲದ ಕರುಣಾಸಾಗರ್, ಅವರ ಪತ್ನಿ ಬಿಂದು (28), ಇಶಿತಾ (21), ಡಾ.ಧನುಶಾ (21) ಕೇರಳ ಮೂಲದ ಅಕ್ಷಯ್ ಗೋಯಲ್, ಹರ್ಯಾಣ ಮೂಲದ ಉತ್ಸವ್ ಮತ್ತು ಹುಬ್ಬಳ್ಳಿಯ ರೋಹಿತ್ (23) ಎಂದು ಗುರುತಿಸಲಾಗಿದೆ. 6 ಜನ ಸ್ಥಳದಲ್ಲಿ ಮೃತಪಟ್ಟಿದ್ದಾರೆ, ಓರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಅಪಘಾತದ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿ ಆಡುಗೋಡಿ ಸಂಚಾರಿ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾರಿನ ಮುಂದಿನ ಸೀಟ್ನಲ್ಲಿ ಮೂವರು ಕುಳಿತಿದ್ದರು ಹಾಗೂ ಹಿಂಬದಿ ಸೀಟ್ನಲ್ಲಿ ನಾಲ್ವರು ಕುಳಿತಿದ್ದರು. ಕಾರಿನಲ್ಲಿದ್ದ 7 ಜನರಲ್ಲಿ ಯಾರೂ ಸೀಟ್ ಬೆಲ್ಟ್ ಹಾಕಿರಲಿಲ್ಲ. ಇದರಿಂದ ಕಾರಿನಲ್ಲಿದ್ದ ಏರ್ಬ್ಯಾಗ್ ಸಹ ಓಪನ್ ಆಗಿಲ್ಲ ಎಂದು ಸಂಚಾರ ವಿಭಾಗದ ಜಂಟಿ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ಹೇಳಿದ್ದಾರೆ.
ಮೃತ ರೋಹಿತ್ ಲದ್ವಾ BYJU’S ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ
ಕೋರಮಂಗಲದಲ್ಲಿ ಭೀಕರ ಅಪಘಾತದಲ್ಲಿ ಮೃತಪಟ್ಟ ರೋಹಿತ್ ಲದ್ವಾ BYJU’S ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ರೋಹಿತ್ ಲದ್ವಾ ತಂದೆ, ತಾಯಿ ಮೃತಪಟ್ಟಿದ್ದಾರೆ. ರೋಹಿತ್ ಬೆಂಗಳೂರಿನ ಪಿಜಿಯಲ್ಲಿದ್ದು ಕೆಲಸಕ್ಕೆ ಹೋಗುತ್ತಿದ್ದ ಎಂದು ತಿಳಿದುಬಂದಿದೆ.