Thursday, May 9, 2024
Homeಕರಾವಳಿಮನಮಿಡಿಯುವಂತಿದೆ ಆತ್ಮಹತ್ಯೆ ಮಾಡಿಕೊಂಡ ತಾ.ಪಂ ಮಾಜಿ ಉಪಾಧ್ಯಕ್ಷ ಸಂತೋಷ್ ಕುಮಾರ್ ಲಾಯಿಲ ಅವರ ಬದುಕಿನ ಪಯಣ!

ಮನಮಿಡಿಯುವಂತಿದೆ ಆತ್ಮಹತ್ಯೆ ಮಾಡಿಕೊಂಡ ತಾ.ಪಂ ಮಾಜಿ ಉಪಾಧ್ಯಕ್ಷ ಸಂತೋಷ್ ಕುಮಾರ್ ಲಾಯಿಲ ಅವರ ಬದುಕಿನ ಪಯಣ!

spot_img
- Advertisement -
- Advertisement -

ಬೆಳ್ತಂಗಡಿ:ಲಾಯಿಲ ಕಕ್ಯೇನ ನಿವಾಸಿ, ತಾ.ಪಂ ಮಾಜಿ ಉಪಾಧ್ಯಕ್ಷ ಸಂತೋಷ್ ಕುಮಾರ್ ಅವರು ಶನಿವಾರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಮನೆಯಲ್ಲಿ ಒಂದರ ಹಿಂದೆ ಒಂದರಂತೆ ಸಾಲು ಸಾಲು ದುರಂತಗಳೇ ಘಟಿಸಿಹೋಗಿದೆ.

ಅಪಘಾತದಿಂದಲೇ ಅವರ ತಂದೆ, ತಾಯಿ ಹಾಗೂ ನಾಲ್ವರು ಸಹೋದರರು ಕೊನೆಯುಸಿರೆಳೆದಿದ್ದರು. ಲಾಯಿಲದ ಸಂಜೀವ ಸಮಗಾರ ಮತ್ತು ಗೌರಮ್ಮ ದಂಪತಿಗೆ ಒಟ್ಟು10 ಮಂದಿ ಮಕ್ಕಳಲ್ಲಿ,ಆರು ಮಂದಿ ಗಂಡು ಮತ್ತು ನಾಲ್ಕು ಮಂದಿ ಹೆಣ್ಣು ಮಕ್ಕಳು.

ತಂದೆ ಸಂಜೀವ ಅವರು ಮೆದುಳಿನ ರಕ್ತಸ್ರಾವ ದಿಂದ ಕೊನೆಯುಸಿರೆಳೆದರೆ ತಾಯಿ ಮಾರಕ ಕಾಯಿಲೆಗೆ ತುತ್ತಾಗಿ ಇಹಲೋಕ ತ್ಯಜಿಸಿದ್ದರು.ಬಳಿಕ ಹಿರಿಯ ಪುತ್ರ ಗೋಕುಲ್‌ದಾಸ್ ಸಮಗಾರ ಅವರು ಆನಾರೋಗ್ಯಕ್ಕೆ ತುತ್ತಾಗಿದ್ದವರು ಕೊನೆಗೆ ಅವರೂ ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದರು. ಇದಾದ ಕೆಲವೇ ವರ್ಷಗಳ ಅಂತರದಲ್ಲಿ ಸಹೋದರ ಸುಬ್ರಹ್ಮಣ್ಯ ಸಮಗಾರ ಅವರೂ ಅನಾರೋಗ್ಯಕ್ಕೆ ತುತ್ತಾಗಿ ಕೊನೆಯುಸಿರೆಳೆದಿದ್ದರು.ಮೂರನೇ ಸಹೋದರ ರಾಜ ಅವರು ಕಾರ್ಕಳದಲ್ಲಿ ನಡೆದಿದ್ದ ರಸ್ತೆ ಅಪಘಾತದಲ್ಲಿ ಮತ್ತು ಮತ್ತೋರ್ವ ಸಹೋದರ ಗಣೇಶ್ ಸಮಗಾರ ಕೊಯ್ಯೂರು ಕ್ರಾಸ್ ಬಳಿ ನಡೆದಿದ್ದ ರಸ್ತೆ ಅಪಘಾತದಲ್ಲಿ ಇಹಲೋಕ ತ್ಯಜಿಸಿದ್ದರು.ಇದೀಗ ಮನೆಯ‌ ಐದನೇ ಗಂಡು ಮಗನಾಗಿದ್ದ ಸಂತೋಷ್ ಕುಮಾರ್ ಸಮಗಾರ ಶನಿವಾರ ಬಾವಿಗೆ ಹಾರಿ‌ ಆತ್ಮಹತ್ಯೆಗೆ ಶರಣಾಗಿದ್ದಾರೆ.


ಎರಡು ವರ್ಷಗಳ ಹಿಂದೆ ಆದ ಅಪಘಾತದಲ್ಲಿ ಅವರ ಸೊಂಟಕ್ಕೆ ತೀವ್ರವಾದ ಗಾಯವಾಗಿದ್ದು, ಬಳಿಕ ಸೊಂಟದ ಕೆಳಗೆ ಸ್ವಾಧೀನ‌ ಕಳೆದುಕೊಂಡಿದ್ದ ಅವರು ಆರಂಭದಲ್ಲಿ ಮಂಗಳೂರಿನ ಎ.ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ತದ ನಂತರ ಸೇವಾ ಭಾರತಿ ಕನ್ಯಾಡಿಯ ವಿನಾಯಕ ರಾವ್ ಅವರ ಸಹಾಯದಿಂದ ಕೊಕ್ಕಡದಲ್ಲಿರುವ ಬೆನ್ನುಮೂಳೆ ಮುರಿತಕ್ಕೊಳಗಾದವರ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ಮತ್ತು ಫಿಸಿಯೋಥರಫಿ ಪಡೆದು ಸ್ವಲ್ಪ ಚೇತರಿಸಿಕೊಂಡಿದ್ದರು.

ಅಪಘಾತದವಾದ ಬಳಿಕ ಅವರಿಗೆ ಸ್ವತಂತ್ರ್ಯವಾಗಿ ನಡೆಯಲಾಗದೆ ಸಮಸ್ಯೆಗೊಳಗಾಗಿದ್ದರು. ಅವರ ಆರೈಕೆಗೆ ರಾಜು ಕಾಶಿಬೆಟ್ಟು ಮೊದಲಾದವರು ಸಹಾಯ ಮಾಡುತ್ತಿದ್ದರು. ಇತ್ತೀಚೆಗೆ ಅವರಿಗೆ ಸೊಂಟದ‌ ಕೆಳಗೆ ಗಾಯಕೂಡ ಆಗಿ ವಾಸಿಯಾಗದೆ ತೊಂದರೆಗೊಳಗಾಗಿದ್ದರು. ವೀಲ್ ಚೇರ್‌ನಲ್ಲೇ ಮನೆಯಲ್ಲಿ ಓಡಾಡಿ ಅಲ್ಲಿಂದ ರಿಕ್ಷಾದ ಚಾಲನಾ ಸೀಟಿನಲ್ಲಿ ಕುಳಿತುಕೊಳ್ಳುತ್ತಿದ್ದ ಅವರು ಜೀವನದಲ್ಲಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದರು. ಅವಿವಾಹಿತರೂ ಆಗಿದ್ದುದರಿಂದ ಚಿಂತೆಗೂ ಒಳಗಾಗಿದ್ದು, ಕಳೆದ ಆರು ತಿಂಗಳಿನಿಂದ ವಿಚಲಿತರಾಗಿದ್ದಂತೆ ವರ್ತಿಸುತ್ತಿದ್ದರು ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.

ಶನಿವಾರದಂದು ಕಾಶಿಬೆಟ್ಟುವಿನ ರಾಜು ಅವರ ಜೊತೆಯಲ್ಲಿ ತನ್ನ ರಿಕ್ಷಾದಲ್ಲಿ ಮಧುಸೂಧನ ಅವರ ಮನೆಗೆ ಹಣ್ಣುಹಂಪಲು ನೀಡಲೆಂದು ಕೊನೆಯ ಪ್ರಯಾಣ ಮಾಡಿದ್ದರು. ಆದರ್ಶನಗರ ಸರಕಾರಿ ಬಾವಿಯ ಬಳಿಯೇ ರಿಕ್ಷಾ‌ನಿಲ್ಲಿಸಿ ರಾಜು ಕಟ್ಟು ನೀಡಲು ಕೆಳಗಿಳಿದು ಹೋಗಿದ್ದರು. ಈ ವೇಳೆ ಎದ್ದು ನೇದಾಡಲಾಗದ ಸಂತೋಷ್ ಅವರು ಬಾವಿ ಕಟ್ಟೆಯ ಬದೀಗೆ ರಿಕ್ಷಾ ತಂದು ನಿಲ್ಲಿಸಿ‌ ಅಲ್ಲಿಂದಲೇ ಬಾವಿಗೆ ಜಿಗಿದಿದ್ದರು.

ನಂತರದಲ್ಲಿ ರಾಜು ಅವರು ಬಂದು ನೋಡುವ ವೇಳೆ ಸಂತೋಷ್ ರಿಕ್ಷಾದಲ್ಲಿ ಕಾಣದ್ದನ್ನು ಕಂಡು ಭಯಗೊಂಡು ಎಲ್ಲರಿಗೂ ವಿಚಾರ ತಿಳಿಸಿ ಹುಡುಕಾಟ ಆರಂಭಿಸಿದಾಗ ವಿಚಾರ ಬೆಳಕಿಗೆ ಬಂದಿತು. ಬಳಿಕ ಅಗ್ನಿ ಶಾಮಕದಳದ ಸಹಕಾರದೊಂದಿಗೆ ಹುಡುಕಾಡಿ ಬಾವಿಯಿಂದ ಅವರ ಮೃತದೇಹವನ್ನು ಮೇಲಕ್ಕೆತ್ತಲಾಯಿತು.

ಸಂತೋಷ್‌ ಕುಮಾರ್ ಅವರು ಸಾಮಾಜಿಕವಾಗಿ ತನ್ನನ್ನು ತಾನು ತೊಡಗಿಸಿಕೊಂಡಿದ್ದವರು. ಲಾಯಿಲ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯನ್ನು ಸ್ಥಾಪಿಸಿ‌ ಅದರ ಸ್ಥಾಪಕಾಧ್ಯಕ್ಷರಾಗಿದ್ದವರೂ ಅವರೇ.‌ ಆ ಬಳಿಕ ಲಾಯಿಲ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ, ಉಜಿರೆ – ಬೆಳ್ತಂಗಡಿ ಯು.ಬಿ ಆಪೆ ಅಟೋ‌ ಚಾಲಕರ ಮಾಲಕರ ಸಂಘದ ಅಧ್ಯಕ್ಷರಾಗಿ ಸಹಿತ ಹಲವು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು.ಸಮಾಜದಲ್ಲಿ ಅವರು ಎಷ್ಟು ಕ್ರಿಯಾಶೀಲರು ಎಂಬುದಕ್ಕೆ ಸಾಕ್ಷಿ ಎಂಬಂತೆ, ಅವರು ಪರಿಶಿಷ್ಟ ಜಾತಿಗೆ ಸೇರಿದ್ದರೂ ಕೂಡ ಸಾಮಾನ್ಯ ಕೆಟಗರಿಯಲ್ಲಿ ಚುನಾವಣೆಗೆ ನಿಂತು ತಾ.ಪಂ ಸದಸ್ಯರಾಗಿದ್ದರು. ಇದೇ ಅವಧಿಯಲ್ಲಿ ಅವರು ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸುವ ಅವಕಾಶ ಪಡೆದಿದ್ದರು.

ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಶಾಶ್ವತ ವಿಕಲಾಂಗರಾಗಿದ್ದುದರಿಂದಾಗಿ , ಕಾನೂನು ಹೋರಾಟದ ಬಳಿಕ 10 ಲಕ್ಷಕ್ಕೂ ಹೆಚ್ಚಿನ ಅಪಘಾತ ವಿಮೆ ಹಣ ದೊರೆತಿತ್ತು. ಅವರ ಅಂತ್ಯಸಂಸ್ಕಾರ ಸಂಜೆ ಲಾಯಿಲದ ಅವರ ಸ್ವಂತ ಜಾಗದಲ್ಲಿ ನಡೆದಿದ್ದು, ಈ ಸಂದರ್ಭದಲ್ಲಿ ಬಿಜೆಪಿ ಮಂಡಲದ‌ ಅಧ್ಯಕ್ಷ ಜಯಂತ ಕೋಟ್ಯಾನ್, ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಪ್ರಮುಖರಾದ ಗಿರೀಶ್ ಡೋಂಗ್ರೆ, ಸುಧಾಕರ ಬಿ.ಎಲ್, ಆಶಾ ಬೆನೆಡಿಕ್ಟ್ ಸಾಲ್ಡಾನಾ, ಗಣೇಶ್ ಮೊದಲಾವರು ಭಾಗಿಯಾಗಿದ್ದರು.

- Advertisement -
spot_img

Latest News

error: Content is protected !!