ಮಡಿಕೇರಿ:ಇಲ್ಲಿನ ಜಿಲ್ಲಾ ಶ್ವಾನದಳದಲ್ಲಿ ಕಳೆದ 6 ವರ್ಷಗಳಿಂದ ಸ್ಫೋಟಕ ಪತ್ತೆ ಕಾರ್ಯ ನಿರ್ವಹಿಸುತ್ತಿದ್ದ ‘ರ್ಯಾಂಬೊ’ ಹೆಸರಿನ ಶ್ವಾನವು ಅನಾರೋಗ್ಯದಿಂದ ಮೃತಪಟ್ಟಿದ್ದು ಎಲ್ಲರಲ್ಲೂ ದುಃಖ ತರಿಸಿತು. ಎರಡು ದಿನಗಳ ಹಿಂದೆ ಮಡಿಕೇರಿಯಿಂದ ರ್ಯಾಂಬೊ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ಗೆ ಕರ್ತವ್ಯಕ್ಕೆ ತೆರಳಿದ್ದ. ಮಡಿಕೇರಿಯ ತಣ್ಣನೆಯ ವಾತಾವರಣದಲ್ಲಿದ್ದ ಶ್ವಾನವು, ಅಲ್ಲಿನ ಬಿಸಿಲ ಬೇಗೆಗೆ ಸುಸ್ತಾಗಿತ್ತು. ಬುಧವಾರ ಸಂಜೆಯ ವೇಳೆಗೆ ಜ್ವರ ಹೆಚ್ಚಾಗಿತ್ತು. ರ್ಯಾಂಬೊಗೆ ವೈದ್ಯರು ನಡುರಾತ್ರಿಯವರೆಗೂ ಚಿಕಿತ್ಸೆ ನೀಡಿದರೂ ಅದು ಫಲಿಸಲಿಲ್ಲ. ಜ್ವರದೊಂದಿಗೆ ಹೖದಯಾಘಾತಕ್ಕೆ ಒಳಗಾಗಿ ಪ್ರಾಣಬಿಟ್ಟಿದೆ.
ಸಿಬ್ಬಂದಿಗಳಾದ ಸುಕುಮಾರ್, ಜಿತೇಂದ್ರ ರೈ ನೋಡಿಕೊಳ್ಳುತ್ತಿದ್ದ ಈ ಶ್ವಾನವು ಕಳೆದ 6 ವರ್ಷಗಳಲ್ಲಿ ಜಿಲ್ಲೆಯ ಹಾಗೂ ಹೊರ ಜಿಲ್ಲೆಗಳಲ್ಲಿ ನಡೆದ ವಿವಿಧ ಬಂದೋಬಸ್ತ್ ಕರ್ತವ್ಯದ ವೇಳೆ 400ಕ್ಕೂ ಹೆಚ್ಚು ಸ್ಫೋಟಕ ತಪಾಸಣೆ ಕಾರ್ಯ ಯಶಸ್ವಿಯಾಗಿ ನಿರ್ವಹಿಸಿದೆ.ಸಶಸ್ತ್ರದಳದ ಆವರಣದಲ್ಲಿ ಶ್ವಾನದ ಪಾರ್ಥಿವ ಶರೀರಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರೂ ಅಂತಿಮ ನಮನ ಸಲ್ಲಿಸಿದರು. ಬಳಿಕ ಅಂತಿಮ ಸಂಸ್ಕಾರ ನಡೆಸಲಾಯಿತು