ನವದೆಹಲಿ: ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಬಂಧನದಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬೆಂಬಲಿಸಿ ಎಎಪಿಯ ಶಾಸಕರು ಮತ್ತು ನಾಯಕರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ‘ಐ ಸ್ಟ್ಯಾಂಡ್ ವಿತ್ ಕೇಜ್ರಿವಾಲ್’ ಮತ್ತು ‘ಇಂಡಿಯಾ ವಿತ್ ಕೇಜ್ರಿವಾಲ್’ ಎಂಬ ಹ್ಯಾಶ್ಟ್ಯಾಗ್ ಅಭಿಯಾನವನ್ನು ಆರಂಭಿಸಿದ್ದಾರೆ.
ಇಂಡಿಯಾ ಮೈತ್ರಿಕೂಟವು ಅರವಿಂದ್ ಕೇಜ್ರಿವಾಲ್ಗೆ ಬೆಂಬಲ ವ್ಯಕ್ತಪಡಿಸಿದ್ದು, ಅವರ ಬಂಧನವನ್ನು ಖಂಡಿಸಿದೆ. ‘ದೇಶ್ ಕೇಜ್ರಿವಾಲ್ ಕೆ ಸಾತ್’ ಮತ್ತು ‘ಅರವಿಂದ್ ಕೇಜ್ರಿವಾಲ್ ಅರೆಸ್ಟೆಡ್’ ಹ್ಯಾಶ್ಟ್ಯಾಗ್ಗಳು ಭಾರತದಲ್ಲಿ ಈವರೆಗಿನ ಎಕ್ಸ್ನ ಟಾಪ್ ಐದು ಟ್ರೆಂಡ್ಗಳಲ್ಲಿ ಸ್ಥಾನ ಪಡೆದಿದೆ.
ಪ್ರತಿಭಟನೆ ವೇಳೆ ಪೊಲೀಸರು ವಶಕ್ಕೆ ಪಡೆದಿರುವ ದೆಹಲಿ ಆರೋಗ್ಯ ಸಚಿವ ಸೌರಭ್ ಭಾರಧ್ವಜ್ ಅವರು ತಮ್ಮ ಬೆಂಬಲಿಗರೊಂದಿಗೆ ಅಲಿಪುರ ಪೊಲೀಸ್ ಠಾಣೆ ಬಳಿ ‘ಮೇರ ರಂಗ್ ದೆ ಬಸಂತಿ ಚೋಲ’ ಹಾಡು ಹಾಡಿರುವ ವಿಡಿಯೊವನ್ನು ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದರೊಂದಿಗೆ ಆಪ್ ನಾಯಕರಾದ ಕೈಲಾಶ್ ಗೆಹಲೋತ್, ದುರ್ಗೆಶ್ ಪಾಠಕ್, ಶೆಲ್ಲಿ ಒಬೆರಾಯ್, ಜಾಸ್ಮಿನ್ ಶಾ, ಸಂಜೀವ್ ಜಾ ಮತ್ತು ಸಂಜಯ್ ಸಿಂಗ್ ಪರವಾಗಿ ಅವರ ಪತ್ನಿ ಅನಿತಾ ಸಿಂಗ್ ಹ್ಯಾಶ್ಟ್ಯಾಗ್ ಅಭಿಯಾನದಲ್ಲಿ ಭಾಗಿಯಾಗಿದ್ದಾರೆ.