ಬೆಳ್ತಂಗಡಿ : ಬಂಗಾಡಿ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದು, ಸೆಂಟ್ರಿಂಗ್ ಕೆಲಸ ನಿರ್ವಹಿಸುತ್ತಿದ್ದ ಬಿಹಾರ ಮೂಲದ ಚಂದನ್(35) ಎಂಬವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಡಿ.1 ರಾತ್ರಿ ವೇಳೆ ನಡೆದಿದೆ.
ಹಲವು ವರ್ಷಗಳ ಹಿಂದೆ ಬಂಗಾಡಿ ಪರಿಸರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಚಂದನ್ ರವರು ತಮ್ಮ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದು, ಬಳಿಕ ತಮ್ಮ ಊರಿಗೆ ತೆರಳಿದ್ದರು. ಸುಮಾರು 10 ತಿಂಗಳ ಹಿಂದೆಯಷ್ಟೇ ಈತ ತನ್ನ ಪತ್ನಿ ಮತ್ತು ಮಕ್ಕಳನ್ನು ತನ್ನೂರಿನಲ್ಲಿ ಬಿಟ್ಟು, ಬಂಗಾಡಿಗೆ ಮರಳಿ ಬಂದಿದ್ದರು. ಬಳಿಕ ಬಂಗಾಡಿಯ ಕಾಂಟ್ರಾಕ್ಟುದಾರರೊಂದಿಗೆ ಸೆಂಟ್ರಿಂಗ್ ಕೆಲಸವನ್ನು ನಿರ್ವಹಿಸುತ್ತಿದ್ದು, ಅವರ ಬಾಡಿಗೆ ಮನೆಯಲ್ಲಿಯೇ ವಾಸಿಸುತ್ತಿದ್ದನು. ಡಿ.1 ರಂದು ಕೂಡ ಸೆಂಟ್ರಿಂಗ್ ಕೆಲಸ ನಿರ್ವಹಿಸಿದ್ದ ಚಂದನ್ ಅಂದು ರಾತ್ರಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಇಂದು (ಡಿ.2) ಬೆಳಿಗ್ಗೆ ಆತನಿದ್ದ ಕೋಣೆಯ ಬಾಗಿಲು ತೆರೆದುಕೊಂಡಂತಿದ್ದು, ಒಳಗೆ ಹೋಗಿ ನೋಡಿದ ಸಂದರ್ಭದಲ್ಲಿ ಈ ಕೃತ್ಯ ಬೆಳಕಿಗೆ ಬಂದಿದೆ. ಕೂಡಲೇ ಈ ಬಗ್ಗೆ ವಿಶ್ವನಾಥರವರು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಲ್ಲರೊಂದಿಗೂ ಅನ್ಯೋನ್ಯವಾಗಿದ್ದ ಈತ ಯಾವ ಕಾರಣಕ್ಕಾಗಿ ಈ ಕೃತ್ಯವೆಸಗಿದ್ದಾನೆ ಎಂಬುವುದು ತನಿಖೆಯಿಂದ ಇನ್ನಷ್ಟೇ ತಿಳಿದುಬರಬೇಕಿದೆ.