ಉಡುಪಿ: ಇಲ್ಲಿನ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಾ ತಜ್ಞರು ಸುಮಾರು 32 ವರ್ಷಗಳಿಂದ ದುರ್ಮಾಂಸ ಗಡ್ಡೆಯಿಂದ ಬಳಲುತ್ತಿದ್ದ ಮಹಿಳೆಯಿಂದ ಶಸ್ತ್ರಚಿಕಿತ್ಸೆ ಮೂಲಕ ಸುಮಾರು 8 ಕೆಜಿ ದುರ್ಮಾಂಸವನ್ನು ಯಶಸ್ವಿಯಾಗಿ ಬೇರ್ಪಡಿಸಿದ್ದಾರೆ.
ದುರ್ಮಾಂಸ ಗಡ್ಡೆಯಿಂದ ಬಳಲುತ್ತಿದ್ದ ಮಹಿಳೆ ಕಾರ್ಕಳದ ನಿವಾಸಿ ಪುಷ್ಪಾ (71). ಅವರ ಭುಜದ ಭಾಗದಲ್ಲಿ ಈ ಗಡ್ಡೆ ಇದ್ದು, ಅವರನ್ನು ಚಿಕಿತ್ಸೆಗಾಗಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.
ಶಸ್ತ್ರಚಿಕಿತ್ಸ ತಜ್ಞ ಡಾ| ಸುಜಿತ್ ಅವರು ಜೂ.26ರಂದು ತಮ್ಮ ತಂಡದೊಂದಿಗೆ ಸುಮಾರು 3 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಈ ಗಡ್ಡೆಯನ್ನು ಹೊರತೆಗೆದಿದ್ದಾರೆ.
ಆಸ್ಪತ್ರೆಯ ಜನರಲ್ ಸರ್ಜನ್ ಆಗಿರುವ ಡಾ| ಸುಜಿತ್ ಅವರ ನೇತೃತ್ವದಲ್ಲಿ ಅರವಳಿಕೆ ತಜ್ಞರಾದ ಡಾ| ಉಮೇಶ್ ಉಪಾಧ್ಯಾಯ ಹಾಗೂ ಡಾ| ವಿಶ್ವನಾಥ್ ಶೆಟ್ಟಿ ಹಾಗೂ ನುರಿತ ಶುಶ್ರೂಷಕ ಅಧಿಕಾರಿಗಳ ಸಹಯೋಗದೊಂದಿಗೆ ಈ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಪ್ರಸ್ತುತ ರೋಗಿಯು ಚೇತರಿಕೆ ಕಾಣುತಿದ್ದಾರೆ.