ಸರ್ಕಾರಿ ಶಾಲೆಗಳು ಮತ್ತು ವಿದ್ಯಾರ್ಥಿಗಳ ಶಿಕ್ಷಣದ ಬಗ್ಗೆ ಅಧಿಕಾರಿಗಳು ಕಾಳಜಿಯನ್ನು ಮರೆತಿದ್ದಾರೆ ಎಂಬ ಆರೋಪ ಕೇಳಿಬರುತ್ತಿವೆ. ಇಂತಹ ಆರೋಪಗಳ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಯೊಬ್ಬರು ಸೂರು ಕಳೆದುಕೊಂಡಿದ್ದ ದಲಿತ ವಿದ್ಯಾರ್ಥಿನಿಯ ಕುಟುಂಬಕ್ಕೆ ಮನೆ ಕಟ್ಟಿಸಿಕೊಟ್ಟು ಮಾದರಿಯಾಗಿದ್ದಾರೆ.
ಜಿಲ್ಲೆಯ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯಾಪ್ತಿಯಲ್ಲಿರುವ ಎಸ್ಎಸ್ಎಲ್ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಕುರಿತು ಪರಿಶೀಲನೆ ನಡೆಸುವ ವಿಶೇಷ ಕಾರ್ಯವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್ ಮಾಡುತ್ತಿದ್ದಾರೆ.
ಅಷ್ಟೇ ಅಲ್ಲದೆ ವಿದ್ಯಾರ್ಥಿನಿ ಅನಿತಾ ಎಂಬವರ ಮನೆಗೆ 2021ರಲ್ಲಿ ಲೋಕೇಶ್ ಅವರು ಭೇಟಿ ನೀಡಿದ್ದರು. ಆ ವೇಳೆ, ಸುನಂದಾ ಅವರ ಗುಡಿಸಲಿನಂತಿದ್ದ ಟಾರ್ಪಲಿನ್ ಹೊದಿಕೆಯುಳ್ಳ, ವಿದ್ಯುತ್ ಸಂಪರ್ಕವೂ ಇಲ್ಲದ ಮನೆಯನ್ನು ಕಂಡು ಲೋಕೇಶ್ ಮರುಕಪಟ್ಟಿದ್ದಾರೆ. ಅನಿತಾ ಅವರು ಏಕ ಪೋಷಕರನ್ನು ಹೊಂದಿದ್ದು, ಅವರ ತಾಯಿ ಸುನಂದಾ ದಿನಗೂಲಿ ಕೆಲಸ ಮಾಡಿಕೊಂಡು ತನ್ನ ಎರಡು ಹೆಣ್ಣು ಮಕ್ಕಳನ್ನು ಸಾಕುತ್ತಿದ್ದಾರೆ.
ಇನ್ನೂ ಈ ಕಡುಕಷ್ಟದ ನಡುವೆಯೂ ತಮ್ಮ ದುಡಿಮೆಯಲ್ಲಿ ಒಂದಿಷ್ಟು ಹಣ ಕೂಡಿಸಿ ಮಗಳನ್ನು ಓದಿಸಿದ ತಾಯಿ ಸುನಂದಾ ಅವರ ಸ್ಥೈರ್ಯವನ್ನು ಮೆಚ್ಚಿದ್ದ ಬಿಇಒ, ವಿವಿಧ ಸಂಘಸಂಸ್ಥೆಗಳ, ಗಣ್ಯರ ಸಹಾಯ ಪಡೆದು ಹೊಸ ಮನೆಯೊಂದನ್ನು ಕಟ್ಟಿಸಿಕೊಟ್ಟಿದ್ದಾರೆ.
“ಕುಟುಂಬಕ್ಕೆ ಮನೆ ಕಟ್ಟಲು ಹೇಗೆ ಸಹಾಯ ಮಾಡಬೇಕೆಂದು ಶಿಕ್ಷಕಿ ಗೀತಾಮಣಿ ಅವರೊಂದಿಗೆ ಚರ್ಚಿಸಿದ್ದು, ದಾನಿಗಳ ನೆರವು ಪಡೆದು, ಮನೆ ನಿರ್ಮಿಸಿದ್ದೇವೆ” ಎಂದು ಲೋಕೇಶ್ ಹೇಳಿದ್ದಾರೆಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. ವಿದ್ಯುತ್ ಸಂಪರ್ಕವಿಲ್ಲದಿದ್ದರೂ ದೀಪದ ಬೆಳಕಿನಲ್ಲಿಯೇ ಓದಿದ ಅನಿತಾ, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 568 ಅಂಕ ಗಳಿಸಿದ್ದಾರೆ. ಪ್ರಸ್ತುತ ಕೊಂಬೆಟ್ಟುವಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ.’ಸ್ವಂತ ಮನೆ ನಮ್ಮ ಕನಸಾಗಿತ್ತು. ಬಿಇಒ, ಶಿಕ್ಷಕಿ ಗೀತಾಮಣಿಯವರ ಸಹಕಾರದಿಂದ ಕನಸು ನನಸಾಯಿತು. ಆ ಇಬ್ಬರೂ ಸೇರಿದಂತೆ ಸಹಾಯ ಮಾಡಿದ ಎಲ್ಲ ಸಂಘಸಂಸ್ಥೆ ಹಾಗೂ ದಾನಿಗಳಿಗೆ ನಾವು ಅಭಾರಿಯಾಗಿದ್ದೇವೆ’ ಎಂದು ಸುನಂದಾ ಸಂತಸ ವ್ಯಕ್ತಪಡಿಸಿದ್ದಾರೆ.