ತಿರುವನಂತಪುರಂ: ಕೇರಳವೂ ಸೇರಿದಂತೆ ಇಡೀ ದೇಶದ ಗಮನ ಸೆಳೆದಿರುವ ಚಿನ್ನ ಅಕ್ರಮ ಕಳ್ಳಸಾಗಾಣಿಕೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್, ದಿನಕ್ಕೊಂದು ಸ್ಪೋಟಕ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಖುದ್ದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಆರೋಪ ಮಾಡಿರುವ ಸ್ವಪ್ನಾ ಸುರೇಶ್, ಸಿಎಂ ಪಿಣರಾಯಿ ವಿಜಯನ್ ಅವರಿಂದ ತಮಗೆ ಜೀವ ಬೆದರಿಕೆ ಇದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಪಿಣರಾಯಿ ಅವರ ದಲ್ಲಾಳಿ ಎಂದು ಹೇಳಲಾಗಿರುವ ಶಾಜ್ ಕಿರಣ್ ತಮಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕೇರಳ ಹೈಕೋರ್ಟ್ನಲ್ಲಿ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯಲ್ಲಿ ಸ್ವಪ್ನಾ ಅವರು, ಪಿಣರಾಯಿ ವಿಜಯನ್ ಮತ್ತು ಕೊಡಿಯೇರಿ ಬಾಲಕೃಷ್ಣನ್ ಅವರಿಗೆ ಆತ್ಮೀಯ ಎಂದು ಹೇಳಿಕೊಳ್ಳುವ ಶಾಜ್ ಕಿರಣ್ ಎಂಬ ವ್ಯಕ್ತಿಯನ್ನು ತನಗೆ ಮತ್ತು ಆಕೆಯ ಸಹ ಆರೋಪಿ ಸರಿತ್ ನಾಯರ್ಗೆ ಬೆದರಿಕೆ ಹಾಕಲು ಕಳುಹಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಆರ್ಎಸ್ಎಸ್ ಮತ್ತು ಬಿಜೆಪಿಯ ಪ್ರಚೋದನೆಯಿಂದ ತಾವು ಈ ಹಿಂದೆ ಸಿಎಂ ಪಿಣರಾಯಿ ವಿಜಯನ್ ವಿರುದ್ಧ ಆರೋಪ ಮಾಡಿದ್ದಾಗಿ ಹೇಳುವಂತೆ ತಮ್ಮ ಮೇಲೆ ಒತ್ತಡ ಹೇರಲಾಗುತ್ತಿದೆ. ಒಂದು ವೇಳೆ ಹೀಗೆ ಹೇಳಿಕೆ ನೀಡದಿದ್ದರೆ ತಮ್ಮ ವಿರುದ್ಧ ಮತ್ತು ಸರಿತ್ ನಾಯರ್ ವಿರುದ್ಧ ಹಲವಾರು ಸುಳ್ಳು ಮೊಕದ್ದಮೆಗಳನ್ನು ದಾಖಲಿಸುವುದಾಗಿಯೂ ಬೆದರಿಕೆ ಹಾಕಲಾಗಿದೆ ಎಂದು ಸ್ವಪ್ನಾ ಸುರೇಶ್ ಆರೋಪಿಸಿದ್ದಾರೆ.