ಬೆಳ್ತಂಗಡಿ : ಪದೇ ಪದೇ ಒಂದಲ್ಲ ಒಂದು ವಿಚಾರದಲ್ಲಿ ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆ ಸುದ್ದಿಯಾಗುತ್ತಲೇ ಇದೆ. ಕಳೆದ ವಾರ ಲೋಕಾಯಕ್ತ ಎಸ್ಪಿ ಮತ್ತು ತಂಡ ದಿಢೀರ್ ಭೇಟಿ ನೀಡಿ ಸ್ವಚ್ಛತೆ ಬಗ್ಗೆ ಹಾಗೂ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಗರಂ ಅಗಿ ಆಡಳಿತ ವೈದ್ಯಾಧಿಕಾರಿ, ಟಿ.ಹೆಚ್.ಓ ಕಲಾಮಧು ಶೆಟ್ಟಿ ಹಾಗೂ ಕರ್ತವ್ಯ ನಿರತ ವೈದ್ಯರನ್ನು ತರಾಟೆಗೆ ತೆಗೆದುಕೊಂಡು ನಂತರ ಸರಿಪಡಿಸಲು ಸೂಚನೆ ನೀಡದರೂ ವೈದ್ಯರು ಹಾಗೂ ಸಿಬ್ಬಂದಿ ಇನ್ನೂ ಕೂಡ ಗಾಢ ನಿದ್ದೆಯಿಂದ ಎದ್ದಂತೆ ಕಾಣುತ್ತಿಲ್ಲ.
ಸರಕರಿ ಆಸ್ಪತ್ರೆಯ ಶವಗಾರದೊಳಗೆ ಹಲವು ತಿಂಗಳಿಂದ ಮಳೆ ಕೆಸರು ನೀರು ನೇರ ಬಂದು ನಿಲ್ಲುತ್ತಿದ್ದು ಇದರಿಂದ ಗಬ್ಬು ವಾಸನೆ ಬರುತ್ತಿದೆ. ಶವಪರೀಕ್ಷೆ ವೇಳೆ ಕೆಲಸಗಾರರು ಹಲವು ಬಾರಿ ಜಾರಿ ಬಿದ್ದು ಗಾಯಗೊಂಡ ಘಟನೆ ಕೂಡ ನಡೆದಿದೆ. ಇದನ್ನು ಸರಿಪಡಿಸುವ ಕೆಲಸ ಮಾಡಿಸಲು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ಶವಗಾರದೊಳಗೆ ಕೆಸರು ನೀರು ನಿಂತಿರುವ ವಿಡಿಯೋ ಇದೀಗ ವೈರಲ್ ಆಗಿ ಕೆಲ ದಿನಗಳು ಕಳೆದಿದೆ. ಆದ್ರೆ ಶವ ಪರೀಕ್ಷೆಗೆ ಬರುವ ಕರ್ತವ್ಯ ನಿರತ ವೈದ್ಯರು ಇದರ ಬಗ್ಗೆ ಚಿಂತೆ ಮಾಡದೆ ಮುಖಕ್ಕೆ ಮಾಸ್ಕ್ ಹಾಕಿಕೊಂಡು ತಮ್ಮ ಶವಪರೀಕ್ಷೆ ಕೆಲಸ ಮಾಡಿ ಹೊರಟು ಹೋಗುತ್ತಾರೆ ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು.
ಶವಗಾರ ಕಟ್ಟಡ ಬೆಳ್ತಂಗಡಿ ತಾಲೂಕು ವೈದ್ಯಾಧಿಕಾರಿ ಡಾ.ಕಲಾಮಧು ಶೆಟ್ಟಿ ಅವರ ಕಚೇರಿ ಹಿಂಭಾಗದಲ್ಲಿಯೇ ಇದ್ದು, ಇಲ್ಲಿ ಇಷ್ಟೊಂದು ಅವ್ಯವಸ್ಥೆ ಇದ್ದರೂ ಅವರು ಇದರ ಬಗ್ಗೆ ಕ್ಯಾರೆ ಅನ್ನದಿರುವುದು ಯಾಕೆ ಅನ್ನೋದು ಯಕ್ಷ ಪ್ರಶ್ನೆಯಾಗಿದೆ.