ಬೆಂಗಳೂರು: ಭಗ್ನಪ್ರೇಮಿ ನಾಗೇಶ್ ಆಸಿಡ್ ದಾಳಿ ಪ್ರಕರಣ ಮಾಸುವ ಮುನ್ನ ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಕ್ರೂರ ಘಟನೆ ನಡೆದಿದೆ. ಮಹಿಳೆಯೊಬ್ಬರ ಮೇಲೆ ಪ್ರಿಯಕರ ಆಸಿಡ್ ಎರಚಿ ವಿಕೃತಿ ಮೆರೆದಿದ್ದಾನೆ.
ಬೆಂಗಳೂರಿನ ಗೋರಿಪಾಳ್ಯದಲ್ಲಿ ಘಟನೆ ನಡೆದಿದೆ. ಸಂತ್ರಸ್ತೆ ಇಂದು ಬೆಳಗ್ಗೆ ಕೆ.ಎಸ್.ಲೇಔಟ್ನಿಂದ ಜೆ.ಪಿ. ನಗರದತ್ತ ಹೋಗುತ್ತಿದ್ದರು. ಈ ವೇಳೆ ಹಿಂದೆ ಫಾಲೋ ಮಾಡಿಕೊಂಡು ಬಂದ ಗೋರಿಪಾಳ್ಯದ ಅಹಮದ್ ಎಂಬಾತ ಆಕೆ ಮೇಲೆ ಆಸಿಡ್ ಎರಚಿದ್ದಾನೆ.
ಸಂತ್ರಸ್ತೆ ಮತ್ತು ಅಹಮದ್ ಇಬ್ಬರೂ ಪರಸ್ಪರ ಇಷ್ಟ ಪಟ್ಟಿದ್ದರಂತೆ. ಈಗಾಗಲೇ ಈ ಮಹಿಳೆಗೆ ಬೇರೊಬ್ಬನ ಜೊತೆ ಮದ್ವೆಯಾಗಿ ಒಬ್ಬ ಮಗಳಿದ್ದಾಳೆ. ಆದರೂ ಅಹಮದ್ ಮತ್ತು ಮಹಿಳೆ ಇಬ್ಬರ ನಡುವೆ ಸಲುಗೆ ಬೆಳೆದಿತ್ತು ಎನ್ನಲಾಗಿದೆ. ಹಾಗಾಗಿ ತನ್ನನ್ನು ಮದುವೆಯಾಗುವಂತೆ ಆಕೆಗೆ ಅಹಮದ್ ಒತ್ತಾಯಿಸುತ್ತಿದ್ದ. ಮದ್ವೆ ಆಗಲು ಮಹಿಳೆ ಕಾಲಾವಕಾಶ ಕೇಳಿದ್ದರಂತೆ. ಬೇಗ ಮದುವೆಯಾಗುವಂತೆ ಪೀಡಿಸುತ್ತಿದ್ದ ಅಹಮದ್, ಇದೇ ವಿಚಾರಕ್ಕೆ ಪದೇ ಪದೆ ಜಗಳ ತೆಗೆಯುತ್ತಿದ್ದ. ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಜಗಳವೂ ಆಗಿತ್ತು. ಸಿಟ್ಟಿಗೆದ್ದ ಅಹಮದ್, ಇಂದು ಬೆಳಗ್ಗೆ ಮಹಿಳೆಯನ್ನ ಫಾಲೋ ಮಾಡಿಕೊಂಡು ಹೋಗಿ ಸಾರಕಿ ಸಿಗ್ನಲ್ ಬಳಿ ಆಕೆಯನ್ನು ಅಡ್ಡಗಟ್ಟಿ ಮುಖಕ್ಕೆ ಆಸಿಡ್ ಎರಚಿ ಪರಾರಿಯಾಗಿದ್ದಾನೆ. ಸಂತ್ರಸ್ತೆಯ ಬಲಗಣ್ಣು ಗಂಭೀರ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.