ಕೊಚ್ಚಿ: ಕೇರಳದಲ್ಲಿ ಆಡಳಿತಾರೂಢ ಸಿಪಿಐ (ಎಂ)- ಎಲ್ಡಿಎಫ್ ನೇತೃತ್ವದ ಸರ್ಕಾರಕ್ಕೆ ತ್ರಿಕ್ಕಾಕರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ವಿರೋಧಪಕ್ಷ ಕಾಂಗ್ರೆಸ್- ಯುಡಿಎಫ್ ಎದುರು ಭಾರಿ ರಾಜಕೀಯ ಹೊಡೆತ ಅನುಭವಿಸಿದೆ. ಕೊಚ್ಚಿಯ ತ್ರಿಕ್ಕಾಕರ ವಿಧಾನಸಭೆ ಉಪ ಚುನಾವಣೆಯ ಬಹು ನಿರೀಕ್ಷಿತ ಫಲಿತಾಂಶ ಇಂದು ಪ್ರಕಟವಾಗಿದ್ದು, ಎಡ ಪಕ್ಷದ ಅಭ್ಯರ್ಥಿ ಜೋ ಜೋಸೆಫ್ ಎದುರು ಕಾಂಗ್ರೆಸ್ನ ಉಮಾ ಥಾಮಸ್ ಅವರು 25 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಐತಿಹಾಸಿಕ ಗೆಲುವು ಕಂಡಿದ್ದಾರೆ.
ಭರ್ಜರಿ ಪ್ರಚಾರ ನಡೆಸುವ ಮೂಲಕ ಬೃಹತ್ ಗೆಲುವಿನ ಲೆಕ್ಕಾಚಾರ ಹಾಕಿದ್ದ ಆಡಳಿತಾರೂಢ ಸಿಪಿಐ (ಎಂ) ಪಕ್ಷಕ್ಕೆ ಇದು ಆಘಾತ ಹಾಗೂ ಮುಜುಗರ ಉಂಟುಮಾಡಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಪಕ್ಷದ ತಳಮಟ್ಟದ ಕಾರ್ಯಕರ್ತರಿಂದ ಹಿಡಿದು ಪ್ರಮುಖ ನಾಯಕರು, ಸಚಿವರು ಇಲ್ಲಿ ಅಭೂತಪೂರ್ವ ಪ್ರಚಾರ ನಡೆಸಿದ್ದರು. ಈ ಸೋಲನ್ನು ಸಿಪಿಎಂ, ‘ಅನಿರೀಕ್ಷಿತ’ ಮತ್ತು ‘ಅಘಾತಕಾರಿ’ ಎಂದು ಹೇಳಿದೆ. ಎರಡನೇ ಅವಧಿಯಲ್ಲಿ ತನ್ನ ಮೊದಲ ವರ್ಷವನ್ನು ಆಚರಿಸಿಕೊಳ್ಳುತ್ತಿರುವ ಪಿಣರಾಯಿ ವಿಜಯನ್ ಸರ್ಕಾರಕ್ಕೆ ಈ ಗೆಲುವು ಕಪಾಳಮೋಕ್ಷ ಎಂದು ಕಾಂಗ್ರೆಸ್ ನಾಯಕರು ಬಣ್ಣಿಸಿದ್ದಾರೆ.
.