ಬೆಳ್ತಂಗಡಿ; ನೂತನವಾಗಿ ನಿರ್ಮಾಣಗೊಂಡಿರುವ ಲಾಯಿಲ ಕೋಟಿ ಕಟ್ಟೆ ರಸ್ತೆಯ ಕಾಮಗಾರಿ ಅತ್ಯಂತ ಕಳಪೆಯಾಗಿದ್ದು ಕಾಮಗಾರಿಯಲ್ಲಿ ಕೋಟ್ಯಾಂತರ ರುಪಾಯಿಯ ಭ್ರಷ್ಟಾಚಾರ ನಡೆದಿದೆ ಈ ಬಗ್ಗೆ ಸಮಗ್ರವಾದ ತನಿಖೆ ನಡೆಸುವಂತೆ ಮಾಜಿ ಶಾಸಕ ಕೆ ವಸಂತ ಬಂಗೇರ ಒತ್ತಾಯಿಸಿದ್ದಾರೆ.
ಬುಧವಾರ ಲಾಯಿಲಕ್ಕೆ ತೆರಳಿ ರಸ್ತೆ ಕಾಮಗಾರಿ ವೀಕ್ಷಿಸಿದ ಬಳಿಕ ಅವರು ಮಾದ್ಯಮದವರೊಂದಿಗೆ ಮಾತನಾಡಿದರು. ಲಾಯಿಲದಿಂದ ಕೋಟಿ ಕಟ್ಟೆಯ ವರೆಗೆ 7.45 ಕಿ.ಮೀ ರಸ್ತೆ ಯನ್ನುವ 7.93ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು ಇದೀಗ ರಸ್ತೆ ಕಾಮಗಾರಿ ಪೂರ್ಣಗೊಂಡ ಬೆನ್ನಲ್ಲಿಯೇ ರಸ್ತೆಯ ಡಾಮರು ಕಿತ್ತು ಹೋಗಲಾರಂಭಿಸಿದೆ. ಹೊಸ ರಸ್ತೆ ನಿರ್ಮಾಣಕ್ಕೆ ಅನಯದಾನ ಮಂಜೂರಾದರೆ ಇಲ್ಲಿ ರಸ್ತೆಯನ್ನು ನಿರ್ಮಿಸಿದೆ. ಹಳೆಯ ರಸ್ತೆಯ ಮೇಲೆ ಒಂದಿಷ್ಟು ಡಾಮರು ಹಾಕಿ ಕಾಮಗಾರಿ ಪೂರ್ಣಗೊಂಡಿದೆ ಎಂದು ತೋರಿಸಲಾಗಿದೆ ಎಂದು ಅವರು ಆರೋಪಿಸಿದರು. ಪ್ರಧಾನ ಮಂತ್ರಿ ಗ್ರಾಮಸಡಕ್ ಯೋಜನೆಯಲ್ಲಿ ರಚನೆಯಾಗಿರುವ ರಸ್ತೆಯ ಕಾಮಗಾರಿಯಲ್ಲಿ ಯಾವುದೇ ಮಾನದಂಡಗಳನ್ನು ಪಾಲಿಸಲಾಗಿಲ್ಲ ಎಂದು ಅವರು ರಸ್ತೆಯ ಡಾಮರು ಕಿತ್ತು ಹೋಗಿರುವುದನ್ನು ಪ್ರದರ್ಶಿಸಿ ವಿವರಿಸಿದರು.
ಕಳಪೆ ಕಾಮಗಾರಿ ನಡೆಸಿ ಕೋಟ್ಯಾಂತರ ರುಪಾಯಿಯ ಅವ್ಯವಹಾರ ನಡೆದಿದ್ದು ಇದರ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡುವುದಾಗಿ ಅವರು ತಿಳಿಸಿದರು. ಬೆಳ್ತಂಗಡಿ ತಾಲೂಕಿನಲ್ಲಿ ರಸ್ತೆ ಕಾಮಗಾರಿಯಲ್ಲಿ ಭಾರೀ ಅವ್ಯವಹಾರಗಳು ನಡೆಯುತ್ತಿದ್ದು ಈ ವಿಚಾರಗಳನ್ನು ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್ ಅವರ ಮೂಲಕ ಸದನದ ಗಮನಕ್ಕೆ ತರಲಾಗುದು. ತಾಲೂಕಿನಲ್ಲಿ ನಡೆದಿರುವ ಕೋಟ್ಯಾಂತರ ರುಪಾಯಿ ಅವ್ಯವಹಾರದ ಬಗ್ಗೆ ಸಮಗ್ರ ತನಿಖೆ ನಡೆಸವಂತೆ ಒತ್ತಾಯಿಸಿದರು.
ಸ್ಥಳದಿಂದಲೇ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿದ ಬಂಗೇರ ಅವರು ಮೇಲ್ನೋಟಕ್ಕೆ ಕಳಪೆ ಕಾಮಗಾರಿ ನಡೆದಿರುವುದು ಸ್ವಷ್ಟವಾಗುತ್ತಿರುವಾಗ ಈ ಕಾಮಗಾರಿಗೆ ಯಾವರೀತಿಯಾಗಿ ಟೆಸ್ಟ್ ಮಾಡಿ ಪ್ರಮಾಣ ಪತ್ರ ನೀಡಲಾಗಿದೆ ಎಂದು ಪ್ರಶ್ನಿಸಿದರು. ಹಿರಿಯ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಆಗಮಿಸಿ ಕಾಮಗಾರಿಯ ಪರಿಶೀಲನೆ ನಡೆಸಿ ಕಳಪೆ ಕಾಮಗಾರಿಗೆ ಕಾರಣರಾದವರ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ರಂಜನ್ ಜಿ ಗೌಡ, ಶೈಲೇಶ್ ಕುಮಾರ್, ಸಿಪಿಐಎಂ ಮುಖಂಡ ಶೇಖರ ಲಾಯಿಲ ಇದ್ದರು.
ಕಾಲಲ್ಲಿ ಒದ್ದರೆ ಕಿತ್ತುಬರುವ ಡಾಮರು:
ಲಾಯಿಲ-ಕೋಟಿ ಕಟ್ಟೆ ರಸ್ತೆಯಲ್ಲಿ ಡಾಮರೀಕರಣ ಎಷ್ಟು ಕಳಪೆಯಾಗಿದೆಯೆಂದರೆ ಕಾಲಲ್ಲಿ ಒದ್ದರೆ ಡಾಮರು ರೊಟ್ಟಿಯಂತೆ ಎದ್ದು ಬರುತ್ತಿದೆ. ರಸ್ತೆಯ ಯಾವ ಭಾಗದಲ್ಲಿಯೂ ಕೋಲಿನಿಂದಲೇ ಡಾಮರನ್ನು ತೆಗೆಯಬಹುದಾಗಿದೆ. ರಸ್ತೆಯ ಮೇಲೆ ಹಾಕಲಾಗಿರುವ ಡಾಮರ್ ಕೋಟಿನ ಒಳಗೆ ಹಲವೆಡೆ ರಸ್ತೆಯನ್ನೇ ನಿರ್ಮಿಸಿಲ್ಲ.ಬರೇ ಮಣ್ಣಿನ ಮೇಲೆ ಡಾಮರು ಹಾಕಲಾಗಿದೆ. ಕೆಲವೆಡೆ ಈಗ ಹಾಕಿರುವ ಹೊಸ ಡಾಮರಿನ ಅಡಿಯಲ್ಲಿ ಹಳೆಯ ರಸ್ತೆಯೇ ಕಾಣಿಸುತ್ತಿದೆ. ರಶ್ಮೀ ಕನ್ ಸ್ಟ್ರಕ್ಷನ್ ಕಾರ್ಕಳ ಇವರು ಈ ಕಾಮಗಾರಿಯನ್ನು ನಿರ್ವಹಿಸಿದ್ದಾರೆ. ಈ ಕಾಮಗಾರಿ ಐದು ವರ್ಷದ ರಸ್ತೆ ನಿರ್ವಹಣೆಯೂ ಸೇರಿದ ಗುತ್ತಿಗೆಯಾಗಿದೆ. ಆದರೆ ಕಾಮಗಾರಿ ಪೂರ್ಣಗೊಂಡ ತಿಂಗಳ ಒಳಗೆಯೇ ರಸ್ತೆ ಈ ಸ್ಥಿತಿಗೆ ಬಂದಿರುವುದುದು ವಿಶೇಷ.
ಗುಣ ಮಟ್ಟ ಪ್ರಮಾಣೀಕರ ಮಾಡಿದಲ್ಲಿಯೇ ರಸ್ತೆ ಕಿತ್ತು ಬರುತ್ತಿದೆ:
ಇಲಾಖೆಯವರು ರಸ್ತೆ ಕಾಮಗಾರಿ ಮುಗಿದ ಬಳಿಕ ಗುಣಮಟ್ಟ ಪ್ರಮಾಣೀಕಾರಣದ ಕಾರ್ಯ ವನ್ನೂಪೂರ್ಣಗೊಳಿಸಿದ್ದಾರೆ. ಸುಮಾರು ಹತ್ತು ಕಡೆ ಗುಣಮಟ್ಟದ ಪ್ರಮಾಣೀಕರಣದ ಗುರುತುಗಳಿವೆ ಆದರೆ ಗುಣಮಟ್ಟ ಪ್ರಮಾಣೀಕರಣ ಮಾಡಿರುವಲ್ಲಿಯೇ ರಸ್ತೆಯ ಡಾಮರು ಕಿತ್ತು ಹೋಗುತ್ತಿದೆ.