ಕಾರವಾರ: ಮೀನುಗಾರಿಕೆಗೆ ತೆರಳಿದ್ದ ಬೋಟ್ಗೆ ಆಕಸ್ಮಿಕ ಬೆಂಕಿ ತಗುಲಿ ಬೋಟ್ ಭಾಗಶಃ ಸುಟ್ಟು ಕರಕಲಾಗಿದ್ದು, ಬೋಟ್ನಲ್ಲಿದ್ದ ಏಳು ಮಂದಿ ಮೀನುಗಾರರರನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಿಸಿದ ಘಟನೆ ಕಾರವಾರದಲ್ಲಿ ನಡೆದಿದೆ.
ಮಲ್ಪೆ ಮೂಲದ ವರದ ವಿನಾಯಕ ಎಂಬ ಬೋಟ್ ಮೀನುಗಾರಿಕೆ ನಡೆಸುತ್ತಾ ಕಾರವಾರ ಸಮೀಪ ಬಂದಾಗ ಬೋಟ್ನ ಇಂಜಿನ್ ರೂಮ್ನಲ್ಲಾದ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿತ್ತು. ನೋಡ ನೋಡುತ್ತಿದ್ದಂತೆ ಬೆಂಕಿಯ ಜ್ವಾಲೆ ಹೆಚ್ಚಾಗಿತ್ತು.ಅವಘಡದ ಬಗ್ಗೆ ಮಾಹಿತಿ ಪಡೆದ ನವ ಮಂಗಳೂರಿನ ಕೋಸ್ಟ್ ಗಾರ್ಡ್ ಅಧಿಕಾರಿಗಳು, ತಕ್ಷಣವೇ ಕಾರವಾರದ ‘ಸಿ 155’ ಗಸ್ತು ನೌಕೆಯಲ್ಲಿ ರಕ್ಷಣಾ ಸಿಬ್ಬಂದಿಯನ್ನು ಕಾರವಾರಕ್ಕೆ ಕಳುಹಿಸಿಕೊಟ್ಟರು.ಪರಿಸ್ಥಿತಿಯನ್ನು ಅವಲೋಕಿಸಿದ ಸಿಬ್ಬಂದಿ, ದೋಣಿಯಲ್ಲಿದ್ದ ಮೀನುಗಾರರನ್ನು ಸಮೀಪದಲ್ಲಿದ್ದ ಮತ್ತೊಂದು ಮೀನುಗಾರಿಕಾ ದೋಣಿ ‘ವಜ್ರ’ಕ್ಕೆ (IND KA 02 MM 4705) ರವಾನಿಸಿದರು. ಬಳಿಕ ಬೆಂಕಿಯನ್ನು ನಂದಿಸಿದರು. ರಕ್ಷಣಾ ಕಾರ್ಯದಲ್ಲಿ ಇತರ ಮೀನುಗಾರರೂ ಸಹಕರಿಸಿದರು. ರಕ್ಷಿಸಲಾದ ಎಲ್ಲ ಮೀನುಗಾರರೂ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ ತಕ್ಷಣ ಸಮೀಪದಲ್ಲಿಯೇ ಇದ್ದ ವರದರಾಜ ಬೋಟ್ ನವರು ಏಳು ಮಂದಿ ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ.
ಬಳಿಕ ಎರಡು ಬೋಟ್ನ ಮೀನುಗಾರರು ಬೆಂಕಿಯನ್ನು ನಂದಿಸಿದ್ದರಾದರೂ ಬೋಟ್ ಭಾಗಶಃ ಸುಟ್ಟಿದ್ದರಿಂದ ಲಕ್ಷಾಂತರ ರೂಪಾಯಿ ಹಾನಿಯಾಗಿದೆ. ಸದ್ಯ ಕಾರವಾರದ ಬೈತಖೋಲ್ ಬಂದರಿಗೆ ಬೋಟ್ ಅನ್ನು ಎಳೆದು ತರಲಾಗಿದೆ.


