ಬ್ರಹ್ಮಾವರ: ಜನಪರ ರೈತ ಹೋರಾಟ ಸಮಿತಿ ಮತ್ತು ಇತರ ರೈತ ಸಂಘಟನೆಗಳು ಸೇರಿ ಭತ್ತಕ್ಕೆ ಬೆಂಬಲ ಬೆಲೆ ಹಾಗೂ ಮತ್ತಿತರ ಬೇಡಿಕೆ ಈಡೇರಿಸುವಂತೆ ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ 66 ರ ಮಧ್ಯೆ ಕ್ಷಣಕಾಲ ವಾಹನ ಸಂಚಾರ ಸ್ಥಗಿತಗೊಳಿಸಿ ಭತ್ತ ಬಡಿಯುವ ಮೂಲಕ ಶನಿವಾರದಂದು ಸಾಂಕೇತಿಕವಾಗಿ ಪ್ರತಿಭಟನೆ ಮಾಡಲಾಯಿತು.
ಬ್ರಹ್ಮಾವರ ಬಂಟರ ಭವನದಲ್ಲಿ ಕರಾವಳಿಯ ರೈತರು ಬಹಿರಂಗ ಸಭೆ ನಡೆಸಿ, ತಹಶೀಲ್ದಾರ್ ಗೆ ಮನವಿ ಸಲ್ಲಿಸಿ ಬಳಿಕ ಪ್ರತಿಭಟನೆ ನಡೆಸಿದರು. ರಾಜಕೀಯ ರಹಿತವಾಗಿ ನಡೆದ ಪ್ರತಿಭಟನೆಯಲ್ಲಿ ಜಿಲ್ಲೆಯ ವಿವಿಧ ರೈತ ಸಂಘಟನೆಯ ಮುಖಂಡ, ಕಾರ್ಯಕರ್ತರು ಸೇರಿದರು.
ಎರಡು ವರ್ಷದ ಹಿಂದೆ ಸರಕಾರಕ್ಕೆ ಮನವಿ ಕೊಡಲಾಗಿದೆ. ಭತ್ತಕ್ಕೆ ಬೆಂಬಲ ಬೆಲೆ ನವೆಂಬರ್ ಘೋಷಿಸುವಂತೆ ಮನವಿ ಮಾಡಲಾಗಿದೆ. ಆದರೆ ಸರಕಾರ ನಮ್ಮ ಮನವಿಗೆ ಕಿವಿ ಕೊಡಲಿಲ್ಲ. ಈಗ ನಾವು ಹೋರಾಟ ಮಾಡದೆ ಬೇರೆ ವಿಧಿಯೇ ಇಲ್ಲ. ನಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದೇವೆ. ಈಗ ಒಂದು ಎಕರೆಗೆ 32000 ಖರ್ಚು ಬರುತ್ತದೆ. ಮಿಲ್ ನಲ್ಲಿ ಸಿಗುವ 16000 ಬೆಲೆ ಯಾವುದಕ್ಕೂ ಸಾಕಾಗುವುದಿಲ್ಲ. 2500 ಬೆಲೆ ನಿಗದಿ ಮಾಡಬೇಕು. ಎಪಿಎಮ್ಸಿ ಕಾನೂನುಗಳನ್ನು ಸಡಿಲ ಮಾಡಬೇಕು. ರೈತರನ್ನು ಒಟ್ಟಾಗಿ ಬೆಲೆ ನಿಗದಿ ಮಾಡಬೇಕು, ಭತ್ತ ಖರೀದಿ ಕೇಂದ್ರಗಳನ್ನು ತೆರೆಯಬೇಕು. ದಲ್ಲಾಳಿಗಳು ದರ ನಿಗದಿ ಮಾಡ್ತಾರೆ. ಕರಾವಳಿ ಭಾಗದಲ್ಲಿ ತುಂಡು ಭೂಮಿ ಹೆಚ್ಚು, ಮಳೆ ಜಾಸ್ತಿ, ಇಳುವರಿ ಕಡಿಮೆ. ಹಾಗಾಗಿ ಕರಾವಳಿಗೆ ಪ್ರತ್ಯೇಕ ಕೃಷಿ ನೀತಿಯನ್ನು ರೂಪಿಸಬೇಕು. ನಮ್ಮ ಬೇಡಿಕೆಗೆ ಸರಕಾರ ಕೂಡಲೇ ಸ್ಪಂದಿಸಬೇಕು ಎಂದು ರೈತ ಹೋರಾಟ ಸಮಿತಿ, ಕೋಟದ ಅಧ್ಯಕ್ಷರಾದ ಜಯರಾಮ ಶೆಟ್ಟಿ ಮಾತನಾಡಿದರು