ಕಾರ್ಕಳ : ಚಂಡಮಾರುತ ಪರಿಣಾಮವಾಗಿ ಸುರಿಯುತ್ತಿರುವ ಮಳೆಗೆ ತಾಲೂಕಿನ ವಿವಿಧ ಕಡೆಗಳಲ್ಲಿ ಜನ ಜೀವನ ಅಸ್ತವ್ಯಸಸ್ತಗೊಂಡಿದ್ದು, ನೂರಾರು ಎಕರೆ ಭತ್ತದ ಕೃಷಿಗೆ ಹಾನಿಯಾಗಿದೆ.
ಮಳೆಗೆ ಕಣಂಜಾರು ಗ್ರಾಮದ ಕೃಷ್ಣ ಶೆಟ್ಟಿ ಅವರ ಹೊಲದಲ್ಲಿನ ಭತ್ತದ ಪೈರುಗಳಿಗೆ ಹಾನಿಯಾಗಿದ್ದು, ಸುಮಾರು 30 ಸಾವಿರ ರೂ.ಯಷ್ಟು ನಷ್ಟ ಸಂಭವಿಸಿದೆ. ಇನ್ನು ಕುಕ್ಕುಂದೂರು, ಬಜಗೋಳಿ, ರೆಂಜಾಳ, ಮಿಯ್ಯಾರು, ನಕ್ರೆ, ಅಜೆಕಾರು, ಇರ್ವತ್ತೂರು, ಸಾಣೂರು ಸೇರಿದಂತೆ ತಾಲೂಕಿನ ಬಹುತೇಕ ಎಲ್ಲ ಕಡೆಗಳಲ್ಲೂ ಇದೇ ಸ್ಥಿತಿ ಉಂಟಾಗಿದ್ದು ಅಪಾರ ನಷ್ಟವುಂಟಾಗಿದೆ.
ಅನಾದಿ ಕಾಲದ ಲೆಕ್ಕಾಚಾರದ ಪ್ರಕಾರ ಕರಾವಳಿಯಲ್ಲಿ ಆರು ತಿಂಗಳು ಮಳೆ, ಮೂರು ತಿಂಗಳು ಬಿಸಿಲು ಆದರೆ ಇತ್ತೀಚಿನ ವರ್ಷಗಳಲ್ಲಿ ಎಲ್ಲ ಕಾಲವೂ ಮಳೆಗಾಲ ಎನ್ನುವಂತಾಗಿದೆ.ಕಳೆದ ಜೂನ್ನಿಂದ ಇಲ್ಲಿ ತನಕ ಪ್ರತೀ ತಿಂಗಳು ಒಂದಲ್ಲ ಒಂದು ಭೂ ಪ್ರದೇಶದಲ್ಲಿ ಮಳೆಯಾಗುತ್ತಲೇ ಇತ್ತು. ಹವಾಮಾನ ವೈಪರೀತ್ಯ, ವಾಯುಭಾರ ಕುಸಿತದ ಕಾರಣ ಅಕಾಲಿಕ ಮಳೆಯಾಗುತ್ತಿದ್ದು, ಈ ಮೊದಲೇ ಕೋವಿಡ್, ಲಾಕ್ಡೌನ್, ಕಾಡು ಪ್ರಾಣಿಗಳ ಹಾವಳಿ, ಕೃಷಿಗೆ ರೋಗ ಬಾಧೆ ಇನ್ನಿತರ ಕಾರಣಗಳಿಂದ ಕೃಷಿಕರು ಆರ್ಥಿಕ ನಷ್ಟಕ್ಕೆ ಒಳಗಾಗಿದ್ದರು. ಇದೀಗ ಮಳೆಯ ತಾಪತ್ರಯದಿಂದ ಇದ್ದ ಕೃಷಿಯೂ ಮಳೆಗೆ ಆಹುತಿಯಾಗಿದ್ದು ಕೃಷಿಕರ ಸ್ಥಿತಿ ಗಾಯದ ಮೇಲೆ ಬರೆ ಎಳೆದ ಸ್ಥಿತಿಯಂತಾಗಿದೆ.